ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ರೈಲುಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ರಜೆಯಲ್ಲಿ ಊರಿಗೆ, ಪ್ರವಾಸಕ್ಕೆಂದು ಹೋಗುವವರ ಸಂಖ್ಯೆ ಹೆಚ್ಚಾಗಿರುವಾಗ ಅದರ ಲಾಭವನ್ನು ಖಾಸಗಿ ಬಸ್ಸುಗಳ ನಿರ್ವಾಹಕರು ಮಾಡಿಕೊಳ್ಳಲು ಯತ್ನಿಸುತ್ತಾರೆ.
ಬೆಂಗಳೂರಿನಿಂದ ಇತರ ದಕ್ಷಿಣ ನಗರಗಳಿಗೆ ಎ.ಸಿ ಬಸ್ಸಿನಲ್ಲಿ ದೂರದೂರಿಗೆ ಪ್ರಯಾಣಿಸಬೇಕೆಂದರೆ ಸಾವಿರದ 800 ರೂಪಾಯಿಯಿಂದ 4 ಸಾವಿರದ 100 ರೂಪಾಯಿವರೆಗೆ ಟಿಕೆಟ್ ವೆಚ್ಚವಾಗುತ್ತದೆ. ರಾಜ್ಯ ಸಾರಿಗೆ ಇಲಾಖೆ ಖಾಸಗಿ ಬಸ್ಸುಗಳ ಪ್ರಯಾಣ ದರವನ್ನು ನಿಗದಿಪಡಿಸಲು ಒಪ್ಪುತ್ತಿಲ್ಲ. ನಿಯಂತ್ರಣ ಪ್ರಾಧಿಕಾರದ ಅನುಪಸ್ಥಿತಿಯಲ್ಲಿ ಖಾಸಗಿ ಬಸ್ಸುಗಳು ಲಾಬಿ ನಡೆಸುತ್ತವೆ. ಟಿಕೆಟ್ ದರ ಹೆಚ್ಚಿಸುವ ಕುರಿತು ಖಾಸಗಿ ಬಸ್ಸು ನಿರ್ವಾಹಕರಲ್ಲಿ ಕೇಳಿದರೆ, ಇತರ ಸಮಯಗಳಲ್ಲಿನ ನಷ್ಟವನ್ನು ಹಬ್ಬದ ಸೀಸನ್ ಗಳಲ್ಲಿ ಸರಿದೂಗಿಸುತ್ತೇವೆ ಎನ್ನುತ್ತಾರೆ.
'' ಪ್ರತಿವರ್ಷ ಇದೇ ಕಥೆ. ದೂರ ಪ್ರಯಾಣಿಸುವ ಪ್ರಯಾಣಿಕರಿಂದ ಹಣ ಕಿತ್ತುಕೊಳ್ಳುತ್ತಾರೆ ಎಂದು ಬೆಂಗಳೂರಿನಿಂದ ಕೊಚ್ಚಿಗೆ ದೀಪಾವಳಿಗೆ ಹೋಗಲು ಖಾಸಗಿ ಬಸ್ಸಿನಲ್ಲಿ 3 ಸಾವಿರ ರೂಪಾಯಿಗೆ ಟಿಕೆಟ್ ಕಾಯ್ದಿರಿಸಿದ ಎಡ್ವಿನ್ ಥಾಮಸ್ ಹೇಳುತ್ತಾರೆ.
''ನಾವು ಖಾಸಗಿ ಬಸ್ಸು ನಿರ್ವಾಹಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಬಸ್ಸಿನ ದರ ನಿಯಂತ್ರಿಸಲು ಯಾವುದೇ ಕಾನೂನು, ಶಾಸನಗಳಿಲ್ಲ. ಯಾವುದಾದರೂ ನಿಗದಿತ ದೂರುಗಳು ಬಂದರೆ ನಾವು ಕ್ರಮ ಕೈಗೊಳ್ಳಬಹುದು ಎನ್ನುತ್ತಾರೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ.
ಖಾಸಗಿ ಬಸ್ಸುಗಳ ನಿರ್ವಾಹಕರ ವಕ್ತಾರರೊಬ್ಬರು ಹೇಳುವುದು ಹೀಗೆ: ಕೊನೆ ವೇಳೆಯಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ನಾವು ಹೆಚ್ಚು ಹಣ ನಿಗದಿ ಮಾಡುತ್ತೇವೆ. ಅದು ಖಾಸಗಿ ವಿಮಾನಗಳ ದರದಂತೆ. ನಮಗೆ ವಾರಾಂತ್ಯಗಳಲ್ಲಿ ಮತ್ತು ಹಬ್ಬ ಹರಿದಿನಗಳ ಸಮಯಗಳಲ್ಲಿ ಮಾತ್ರ ಸಾಕಷ್ಟು ಪ್ರಯಾಣಿಕರು ಸಿಗುತ್ತಾರೆ. ವಾರಗಳಲ್ಲಿ ಬಸ್ಸು ಖಾಲಿಯಾಗಿ ಸಂಚರಿಸಬೇಕಾಗುತ್ತದೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಬಹುತೇಕ ಖಾಸಗಿ ಬಸ್ಸುಗಳ ನಿರ್ವಾಹಕರು ನಷ್ಟ ಅನುಭವಿಸುತ್ತಿದ್ದಾರೆ. ಸ್ಲೀಪರ್ ಬರ್ತ್ ದರ್ಜೆಯ ಬಸ್ಸುಗಳಿಗೆ ಅನುಮತಿ ನೀಡಿದರೆ ಖಾಸಗಿ ಬಸ್ಸುಗಳ ಟಿಕೆಟ್ ದರ ಕಡಿಮೆಯಾಗಬಹುದು ಎನ್ನುತ್ತಾರೆ. change.orgಯಲ್ಲಿ ಬಸ್ಸುಗಳ ದರ ನಿಯಂತ್ರಣಕ್ಕೆ ಹಲವು ಆನ್ ಲೈನ್ ದೂರುಗಳು ಬಂದಿವೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos