ಬೆಂಗಳೂರು: ಗೆಳೆಯನ ವ್ಹೀಲಿಂಗ್ ಶೋಕಿಗೆ ಯುವತಿಯೊಬ್ಬಳು ಬಲಿಯಾಗಿರುವ ಘಟನೆಯೊಂದು ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಮದ್ರಾಸ್ ರಸ್ತೆಯಲ್ಲಿ ಗುರುವಾರ ನಡೆದಿದೆ.
ಶೈನಿ ಕಿರಣ್. ಕೆ (17) ಸಾವನ್ನಪ್ಪಿದ್ದ ಯುವತಿಯಾಗಿದ್ದು, ಈಕೆ ಹಲಸೂರಿನ ನಿವಾಸಿಯಾಗಿದ್ದಾಳೆ. ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಯುವತಿ ನಿನ್ನೆ ರಾತ್ರಿ ಗೆಳೆಯನೊಂದಿಗೆ ದ್ವಿಚತ್ರ ವಾಹನದಲ್ಲಿ ಬರುತ್ತಿದ್ದಳು. ಈ ವೇಳೆ ದುರ್ಘಟನೆ ನಡೆದಿದೆ
ರಾತ್ರಿ 8.30ರ ಸುಮಾರಿಗೆ ಬೈಕ್ ವೊಂದರಲ್ಲಿ ಶೈನಿ ಮತ್ತು ಆಕೆಯ ಗೆಳಯ ಗೋಪಾಲನ್ ಮಾಲ್ ಬಳಿ ಬರುತ್ತಿದ್ದರು. ಈ ವೇಳೆ ಯುವಕ ವ್ಹೀಲಿಂಗ್ ಮಾಡಿದ್ದಾನೆ. ಪರಿಣಾಮ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಕೂಡಲೇ ಯುವತಿ ರಸ್ತೆ ಮೇಲೆ ಬಿದ್ದಿದ್ದಾಳೆ. ಇದೇ ವೇಳೆ ವೇಗವಾಗಿ ಬರುತ್ತಿದ್ದ ಟೆಂಪೋವೊಂದು ಆಕೆಯ ಮೇಲೆ ಹರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಂತರ ಬೈಕ್ ನ್ನು ಸ್ಥಳದಲ್ಲಿಯೇ ಬಿಟ್ಟ ಯುವತಿಯ ಗೆಳೆಯ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸ್ಥಳದಲ್ಲಿದ್ದ ಜನರು ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಯುವತಿ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ.
ಯುವತಿ ರಸ್ತೆ ಮೇಲೆ ಬಿದ್ದ ನಂತರ ಕೂಡ ಯುವಕ ಬೈಕ್ ನ್ನು ನಿಲ್ಲಿಸಿರಲಿಲ್ಲ. ಅಪಘಾತದ ಬಳಿಕ ಟೆಂಪೋ ಚಾಲಕ ಕೂಡ ಓಡಿಹೋಗಿದ್ದ. ಘಟನೆ ನಂತರ ಸ್ಥಳದಲ್ಲಿ ಸಾಕಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ಸಂಚಾರಿ ಪೊಲೀಸರು ಬಂದು ಸಂಚಾರ ಸುಗಮವಾಗುವಂತೆ ಮಾಡಿದ್ದರು. ಸ್ಥಳದಲ್ಲಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿರಬಹುದೆಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಪ್ರಸ್ತುತ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣರಾದ ಯುವಕ ಹಾಗೂ ಟೆಂಪೋ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಆರೋಪಿಯನ್ನು ಗುರ್ತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.