ಬೆಂಗಳೂರು: ಸಭ್ಯರಂತೆ ಡ್ರೆಸ್ ಮಾಡಿಕೊಂಡು ರೈಲಿನಲ್ಲಿ ನಿದ್ರಿಸುತ್ತಿದ್ದ ಪ್ರಯಾಣಿಕರ ಬಳಿಯಿಂದ ಮೊಬೈಲ್, ಐಫೋನ್, ಲ್ಯಾಪ್ ಟಾಪ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ರಸ್ತೆಯ ಜಿ. ರಮೇಶ್ ಮತ್ತು ಬೆಳಗಾವಿಯ ಶಿವಾನಂದ ಕಾಳಪ್ಪ ಬಂಧಿತ ಆರೋಪಿಗಳು.ಇಬ್ಬರ ವಿರುದ್ಧ ಐಪಿಸಿ 379 ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಕಾಚೀಗುಡ ಎಕ್ಸ್ ಪ್ರೆಸ್ ಮತ್ತು ಕಾವೇರಿ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರು ಪದೇ ಪದೇ ಕಳ್ಳತನ ಸಂಬಂಧ ರೈಲ್ವೇ ಪೊಲೀಸರಿಗೆ ದೂರು ದಾಖಲಿಸಿದ್ದರು. ಮೊಬೈಲ್ ಫೋನ್, ಐ ಪ್ಯಾಡ್ ಮತ್ತು ಲ್ಯಾಪ್ ಟಾಪ್ ಗಳು ನಾಪತ್ತೆಯಾಗಿವೆ ಎಂದು ಹಲವು ಪ್ರಯಾಣಿಕರು ದೂರು ದಾಖಲಿಸಿದ್ದರು ಎಂದು ರೈಲ್ವೆ ರಕ್ಷಣಾ ಪಡೆಯ ಹಿರಿಯ ಡಿವಿಷನಲ್ ಸೆಕ್ಯೂರಿಟಿ ಕಮಿಷನರ್ ಸುರೇಶ್ ಹೇಳಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚಲು ತಂಡ ರಚಿಸಲಾಯಿತು. ಪೊಲೀಸರು ಸಿವಿಲ್ ಡ್ರೆಸ್ ನಲ್ಲೇ ಪತ್ತೆಗೆ ತೆರಳಿದ್ದರು. ಈ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದುದ್ದು ಕಂಡು ಬಂತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾಲ್ಕು ಫೋನ್ ಗಳು, ಕದ್ದಿರುವುದು ತಿಳಿದು ಬಂತು.
ನಂತರ ಈ ಹಿಂದೆ ತಾವು ಹಲವು ಗ್ಯಾಡ್ಜೆಟ್ಸ್ ಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ನಂತರ ಪೊಲೀಸರು ಮಾಗಡಿ ರಸ್ತೆಯಲ್ಲಿರುವ ರಮೇಶ್ ಮನೆಯಲ್ಲಿ ಪರಿಶೀಲಿಸಿದಾಗ, 2 ಐ ಪಾಡ್, 2 ಲ್ಯಾಪ್ ಟಾಪ್, ಸೇರಿದಂತೆ ಒಟ್ಟು 5,39,000 ಮೌಲ್ಯದ ವಸ್ತುಗಳು ಸಿಕ್ಕಿವೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos