ಬೆಂಗಳೂರು: ಫೇಸ್ ಬುಕ್ ಲೈವ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನ ತಿಳಿಸಿ ಮುಂಬೈಯ ಹೊಟೇಲ್ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ನಿವಾಸಿ ಅರ್ಜುನ್ ಭಾರದ್ವಾಜ್ ವಿಷಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಮೊನ್ನೆಯಷ್ಟೇ ಬಿಗ್ ಬಾಸ್ 4 ಸೀಸನ್ ವಿಜೇತ ಪ್ರಥಮ್ ಕೂಡ ಫೇಸ್ ಬುಕ್ ನಲ್ಲಿ ಲೈವ್ ಆಗಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದರು.
ಹೀಗೆ ಖಿನ್ನತೆ, ಒತ್ತಡದಿಂದ ಬಳಲುತ್ತಿರುವ ಯುವಜನತೆಗೆ ತಮ್ಮ ಸಮಸ್ಯೆಯಿಂದ ಪಾರಾಗಲು ಕುಳಿತಲ್ಲಿಯೇ ತಾಂತ್ರಿಕ ನೆರವು ಒದಗಿಸುವ ಸ್ವ ರಕ್ಷಣೆ ತಾಂತ್ರಿಕ ಸಾಧನವಿದೆ. ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಪುಶ್-ಡಿ(ಅಭ್ಯಾಸ ಮತ್ತು ಖಿನ್ನತೆಗೆ ಸ್ವ ರಕ್ಷಣೆ ಬಳಕೆ) ಎಂಬ ಆಪ್ ಅವುಗಳಲ್ಲೊಂದು.
ಏಪ್ರಿಲ್ 7 ವಿಶ್ವ ಆರೋಗ್ಯ ದಿನವಾಗಿದ್ದು, ಈ ವರ್ಷದ ಘೋಷವಾಕ್ಯ ಖಿನ್ನತೆ ಬಗ್ಗೆ ಮಾತನಾಡೋಣ ಎಂಬುದಾಗಿದೆ. ಖಿನ್ನತೆ ಬಗ್ಗೆ ತಿಳಿದುಕೊಂಡು ಸಮಸ್ಯೆಯಿಂದ ಹೊರಬರಲು ಈ ಸಾಧನ ಸಹಾಯ ಮಾಡುತ್ತದೆ.
ಪುಶ್-ಡಿ ಕಂಪ್ಯೂಟರ್ ಆಧಾರಿತ ಸ್ವ ರಕ್ಷಣೆ ಕಾರ್ಯಕ್ರಮವಾಗಿದ್ದು ಖಿನ್ನತೆಯಿಂದ ಬಳಲುವವರಿಗೆ ಸಹಾಯ ಮಾಡುತ್ತದೆ. ಇದುವರೆಗೆ ಈ ಆಪ್ ನ್ನು 1,000 ಮಂದಿ ಡೌನ್ ಲೋಡ್ ಮಾಡಿದ್ದಾರೆ.
ಆದರೆ ಈ ಸಾಧನದಿಂದ ವ್ಯಕ್ತಿ ಖಿನ್ನತೆಯಿಂದ ಏಕೆ ಬಳಲುತ್ತಿದ್ದಾನೆ ಎಂದು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಮಾನಸಿಕ ಆರೋಗ್ಯ ತಜ್ಞರು ನೀಡುವ ಆರೋಗ್ಯ ಸೇವೆಗೆ ಬದಲಾದ ಸಾಧನ ಕೂಡ ಇದಲ್ಲ.
ಒಮ್ಮೆ ರೋಗಿಗಳು ಪುಶ್ -ಡಿಯ ಸಂಪರ್ಕಕ್ಕೆ ಬಂದರೆ ಸ್ಕೈಪೆ ಅಥವಾ ಕರೆ ಮೂಲಕ ಆರಂಭದಲ್ಲಿ 45 ನಿಮಿಷಗಳವರೆಗೆ ತಂಡದ ಸದಸ್ಯರು ವ್ಯಕ್ತಿಯ ಪ್ರಾಥಮಿಕ ಪರೀಕ್ಷೆ ನಡೆಸುತ್ತಾರೆ.
ಕಳೆದ ನವೆಂಬರ್ ನಿಂದ ಇಲ್ಲಿತನಕ ತಂಡದ ಸದಸ್ಯರು ಕನಿಷ್ಠವೆಂದರೂ 250 ಕರೆಗಳನ್ನು ಸ್ವೀಕರಿಸಿದ್ದಾರೆ. ಅವರಲ್ಲಿ 60 ಮಂದಿಗೆ ಈ ಕಾರ್ಯಕ್ರಮಕ್ಕೆ ಲಾಗ್ ಇನ್ ಆಗಲು ಯೂಸರ್ ನೇಮ್ ಮತ್ತು ಪಾಸ್ ವರ್ಡ್ ನೀಡಲಾಗಿದೆ ಎಂದು ತಂಡದ ಹಿರಿಯ ಸಂಶೋಧಕರೊಬ್ಬರು ಹೇಳುತ್ತಾರೆ. ಯಾರಿಗಾದರೂ ವೈದ್ಯರ ಅವಶ್ಯಕತೆಯಿದ್ದರೆ ತಂಡ ಸಲಹೆ ನೀಡುತ್ತದೆ.
ವೃತ್ತಿ, ಓದು, ಕೆಲಸದ ಒತ್ತಡ, ಸಾಂಸಾರಿಕ ಕಲಹ, ಗಂಡ-ಹೆಂಡತಿ ಸಂಬಂಧದಲ್ಲಿ ತೊಂದರೆ ಇತ್ಯಾದಿ ಅನೇಕ ಸಮಸ್ಯೆಗಳನ್ನು ಹೇಳಿಕೊಂಡು ಲಾಗ್ ಇನ್ ಆಗುತ್ತಾರೆ. ಖಿನ್ನತೆಯಿಂದ ಬಳಲುತ್ತಿರುವವರಿಗೆ ಆರಂಭದಲ್ಲಿ ನಿಮ್ಹಾನ್ಸ್ ನಲ್ಲಿ ಮುಖಾಮುಖಿ ಪರೀಕ್ಷೆ, ಕೌನ್ಸೆಲಿಂಗ್ ಇರುತ್ತದೆ. ದೂರಿದೂರಿನಲ್ಲಿರುವ ಬೆಂಗಳೂರಿಗೆ ಬರಲು ಸಾಧ್ಯವಾಗದವರಿಗೆ ಸ್ಕೈಪೆ ಮೂಲಕ ಆರಂಭಿಕ ಪರೀಕ್ಷೆ ಮಾಡಲಾಗುತ್ತದೆ.
ಇಸೈಕ್ಲಿನಿಕ್, ಯುವರ್ ದೋಸ್ತ್, ಹೀಲ್ ದ ಮೈಂಡ್ಸ್.ಕಾಂ ಮೊದಲಾದ ಆನ್ ಲೈನ್ ಕೌನ್ಸೆಲಿಂಗ್ ವೇದಿಕೆಗಳಿದ್ದರೂ ಪುಶ್-ಡಿ ವಿಭಿನ್ನವಾದುದು. ಉಳಿದೆಡೆ ಬಳಕೆದಾರರು ಚಿಕಿತ್ಸಕರ ಜೊತೆ ಮಾತನಾಡಲು ಲಾಗ್ ಇನ್ ಆಗುತ್ತಾರೆ. ಆದರೆ ಪುಶ್-ಡಿಯಲ್ಲಿ ಮಾನಸಿಕ ಚಿಕಿತ್ಸೆಯಿರುತ್ತದೆ.
ಭಾರತದಲ್ಲಿ ಮಾನಸಿಕ ಆರೋಗ್ಯದ ಪಿರಮಿಡ್ ಬಲಪಡಿಸುವಿಕೆಯ ಅಧ್ಯಯನದ ಭಾಗವಾಗಿದೆ ಇದು. ಇದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಣ ನೀಡಿದ್ದು ಎರಡು ವರ್ಷಗಳ ಅಧ್ಯಯನವಾಗಿದೆ. 2015 ಜೂನ್ ನಲ್ಲಿ ಆರಂಭವಾಗಿದ್ದು ಸೆಪ್ಟೆಂಬರ್ ನಲ್ಲಿ ಮುಗಿಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos