ಬೆಂಗಳೂರು: ನಗರದ ಸಿವಿಲ್ ಮತ್ತು ಸಿಎಆರ್ (ನಗರ ಸಶಸ್ತ್ರ ಮೀಸಲು ಪಡೆ) ಪೊಲೀಸರು ಇನ್ನು ಮುಂದೆ ಹಣೆಗೆ ಕುಂಕುಮ, ವಿಭೂತಿ ಇಡುವಂತಿಲ್ಲ, ಕಿವಿಗೆ ಓಲೆ ಧರಿಸುವಂತಿಲ್ಲ ಹಾಗೂ ಕೈಗೆ ದಾರ ಕಟ್ಟುವಂತಿಲ್ಲ ಎಂದು ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸಿವಿಲ್, ಸಿಎಆರ್ ಸಿಬ್ಬಂದಿ ಸಮವಸ್ತ್ರ ಧರಿಸದಿರುವುದು, ಹಿರಿಯ ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕಿವಿಗೆ ಓಲೆ, ಹಣೆಗೆ ಕುಂಕುಮ ಇಡುವುದು ಮತ್ತು ತಲೆ ಕೂದಲು ಕಟಿಂಗ್ ಮಾಡಿಸದಿರುವುದು, ಕೈಗೆ ಧಾರ ಕಟ್ಟಿಕೊಂಡಿರುವುದು ಗಮನಕ್ಕೆ ಬಂದಿದೆ. ಇದು ಪೊಲೀಸರ ಆಶಿಸ್ತು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ವಿವಿಐಪಿ ಭದ್ರತೆ ವಿಭಾಗದ ಉಪ ಪೊಲೀಸ್ ಆಯುಕ್ತ ಡಿ. ಕಿಶೋರ್ ಬಾಬು ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕು ಎಂಬ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಎಂದರೆ ಶಿಸ್ತು ಪಾಲನಾ ಪಡೆ ಎಂದೇ ಪ್ರಸಿದ್ಧಿ. ಇಂತಹ ಪೊಲೀಸ್ ಸಿಬ್ಬಂದಿ ಹಣೆಗೆ ಕುಂಕುಮ ಇಡುವುದು, ಕಿವಿಗೆ ಓಲೆ, ಕೈಗೆ ದಾರ ಕಟ್ಟುವಂತಿಲ್ಲ ಎಂದು ಪೊಲೀಸ್ ಮ್ಯಾನುಯಲ್ನಲ್ಲಿ ಹೇಳಲಾಗಿದೆ. ಆದರೂ ಈ ರೀತಿಯಾಗಿ ಆಶಿಸ್ತು ಪಾಲನೆಯಾಗುತ್ತಿರುವುದು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಪೊಲೀಸ್ ಮ್ಯಾನ್ಯುಯಲ್ ಪ್ರಕಾರ ಮಹಿಳಾ ಸಿಬ್ಬಂದಿ ಕೂಡ ಓಲೆ, ಬಳೆ ತೊಡುವಂತಿಲ್ಲ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮ, ಬಳೆ, ಓಲೆಗೆ ಮಹತ್ವದ ಸ್ಥಾನ ಇರುವುದರಿಂದ ಇದರ ಅನುಷ್ಠಾನಕ್ಕೆ ಹೋದರೆ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಭಯದಿಂದ ಮಹಿಳೆಯರಿಗೆ ನಿಯಮ ಜಾರಿ ಮಾಡಿಲ್ಲ.