ಅಪರಾಧಿ ಸಯೀದ್ ನೌಶಾದ್ ಮತ್ತು ಅಹ್ಮದ್ ಬಾವಾ ನ್ಯಾಯಾಲಯದಿಂದ ಹೊರಗೆ ಬರುತ್ತಿರುವುದು.
ಮಂಗಳೂರು: ಉಗ್ರರೊಂದಿಗೆ ನಂಟು ಹೊಂದಿ, ದೇಶದ ವಿವಿಧೆಡೆ ಸಂಭವಿಸಿದ್ದ ಸ್ಫೋಟಗಳಿಗೆ ಮಂಗಳೂರಿನಿಂದ ಬಾಂಬ್ ಪೂರೈಸಿದ್ದ 3 ಉಗ್ರರಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರತ್ಯೇಕ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಸ್ಫೋಟಕ ವಸ್ತುಗಳ ದಾಸ್ತಾನು, ಸ್ಫೋಟಕ್ಕೆ ಸಂಚು ಹಾಗೂ ಅಕ್ರಮ ಶಸ್ತ್ರಾಸ್ತ್ರ ಆರೋಪಗಳ ಅಡಿಯಲ್ಲಿ 2008ರಲ್ಲಿ ಬಂಧನಕ್ಕೊಳಗಾಗಿದ್ದ ಸಯ್ಯದ್ ಮಹಮ್ಮದ್ ನೌಶಾದ್, ಅಹ್ಮದ್ ಬಾವಾ ಅಬೂಬಕ್ಕರ್, ಫಕೀರ್ ಅಹ್ಮದ್ ಕಠಿಣ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳಾಗಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳಾದ ರಿಯಾಜ್ ಶಬಾಂದ್ರಿ ಈತನ ಸಹೋದರ ಇಕ್ಬಾಲ್ ಶಂಬಾಂದ್ರಿ ಮತ್ತು ಮುದಾಸ್ಸಿನ್ ಈಗಲೂ ತಲೆಮರೆಸಿಕೊಂಡಿದ್ದಾರೆ.
ಮುಂಬೈ, ಅಹಮದಾಬಾದ್ ಮತ್ತಿತರೆ ಕಡೆಗಳಲ್ಲಿ ನಡೆಸಲಾಗಿದ್ದ ಸರಣಿ ಬಾಂಬ್ ಸ್ಫೋಟಗಳಿಗೆ ಮಂಗಳೂರಿನಿಂದಲೇ ಬಾಂಬ್ ಪೂರೈಕೆ ಮಾಡಲಾಗಿತ್ತು ಎಂಬುದು ಅಧಿಕಾರಿಗಳಿಗೆ ಖಚಿತವಾಗಿತ್ತು. ಈ ಪ್ರಕರಣ ಸಂಬಧ ಒಟ್ಟು 13 ಮಂದಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದು. ಈ ವರೆಗೂ ಪ್ರಕಱಣ ಸಂಬಂಧ 7 ಮಂದಿಯನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಉಗ್ರರ ಪರವಾಗಿ ವಾದ ಮಂಡಿಸಿದ್ದ ವಕೀಲ ವಿಕ್ರಮ್ ಹೆಗ್ಡೆಯವರು ತೀರ್ಪು ಸಂಬಂಧ ಹೇಳಿಕೆಯನ್ನು ನೀಡಿದ್ದು, ನ್ಯಾಯಾಲಯದ ತೀರ್ಪಿನ ವಿರುದ್ಧ ತಿಂಗಳೊಳಗಾಗಿ ಹೈಕೋರ್ಟ್ ಮೆಟ್ಟಿಲೇರಲಾಗುತ್ತದೆ ಎಂದಿದ್ದಾರೆ.
ಪಬ್ಲಿಕ್ ಪ್ರಾಸಿಕ್ಯೂಟರ್ ನಾರಾಯಣ್ ಶೆರಿಗರ್ ಅವರು ನ್ಯಾಯಾಲಯದ ಆದೇಶಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದು, ಭಯೋತ್ಪಾದನೆಯಂತಹ ಕೃತ್ಯಗಳಲ್ಲಿ ಬೆಂಬಲ ನೀಡುವ ಉಳಿದವರಿಗೆ ಈ ಕಠಿಣ ಶಿಕ್ಷೆ ಪಾಠವಾಗಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos