ಮೈಸೂರು: ಶಯದನಹಳ್ಳಿಯ ಜಮೀನೊಂದರಲ್ಲಿ ಸುರಿದಿದ್ದ ರಾಸಾಯನಿಕ ತ್ಯಾಜ್ಯದಿಂದ ಹೊರಹೊಮ್ಮಿದ ಜ್ವಾಲೆಗೆ ಬಿದ್ದು ಬಾಲಕನೊಬ್ಬ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ತ್ಯಾಜ್ಯದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಕೇಂದ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪರಿಸರ ಅಧಿಕಾರಿ ನಿಂಗರಾಜು ಹೇಳಿದ್ದಾರೆ.
ರಾಸಾಯನಿಕ ತ್ಯಾಜ್ಯವನ್ನು ಸುರಿದಿದ್ದರಿಂದ ತಾಪಮಾನ ಹೆಚ್ಚಾಗಿ ಕೆಮಿಕಲ್ ರಿಯಾಕ್ಷನ್ ಆಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ತ್ಯಾಜ್ಯ ಸುರಿದಿರುವ ಸ್ಥಳದಳ್ಲಿ 110 ಡಿಗ್ರಿ ಸೆಲ್ಸಿಯಲ್ ತಾಪಮಾನವಿದೆ, ಈ ಸ್ಥಳ ಮೇಟಗಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸಮೀಪವಿದೆ.
ತ್ಯಾಜ್ಯದ ಮೇಲೆ ಯಾವುದೇ ವಸ್ತು ಎಸೆದರು ಅದನ್ನು ತ್ಯಾಜ್ಯ ಎಳೆದುಕೊಳ್ಳುತ್ತದೆ. ಬಾಲಕ ಕ್ರಿಕೆಟ್ ಬಾಲ್ ತರಲು ಹೋದಾಗ ಅಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
ನೀರು ಸುರಿದಂತೆ ದಟ್ಟ ಹೊಗೆಯೊಂದಿಗೆ ಬೆಂಕಿ ಹೊರಹೊಮ್ಮುತ್ತಿದೆ. ಈ ಸ್ಥಳದಲ್ಲಿ ಎರಡು ಟ್ಯಾಂಕರ್ ನೀರು ಸುರಿದರೂ ಬೆಂಕಿ ಆರುತ್ತಿಲ್ಲ, ಹೀಗಾಗಿ ಈ ಸ್ಥಳವನ್ನು ಮೇ 2 ರವರೆಗೂ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ 144 ನೇ ಸೆಕ್ಷನ್ ಜಾರಿಗೊಳಿಸಲಾಗಿದೆ.