ರಾಜ್ಯ

ಬೆಳ್ಳಂದೂರು ಕೆರೆ ಪ್ರಕರಣ: ಹಸಿರು ನ್ಯಾಯಾಧೀಕರಣಕ್ಕೆ ಕ್ಷಮೆಯಾಚಿಸಿದ ಬಿಬಿಎಂಪಿ

Manjula VN
ಬೆಂಗಳೂರು: ನ್ಯಾಯಾಧೀಕರಣದ ಆದೇಶವನ್ನು ಬದಿಗೊತ್ತುವ ಬಿಬಿಎಂಪಿ ಅಧಿಕಾರಿಗಳ ಪ್ರಯತ್ನಕ್ಕೆ ಹಸಿರು ನ್ಯಾಯಾಧೀಕರಣ ತೀವ್ರವಾಗಿ ಗರಂ ಆದ ಹಿನ್ನಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೇಷರತ್ ಕ್ಷಮೆಯಾಚಿಸಿದ್ದಾರೆ. 
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಹಸಿರು ನ್ಯಾಯಾಧೀಕರಣ, ನಿನ್ನೆ ವಿಚಾರಣೆ ನಡೆಸಿತ್ತು. ಈ ವೇಳೆ ಆದೇಶವನ್ನು ಬದಿಗೊತ್ತುವ ಪ್ರಯತ್ನ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. 
ನ್ಯಾಯಾಧೀಕರಣ ತೀವ್ರವಾಗಿ ವಾಗ್ದಾಳಿ ನಡೆಸಿದ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚವರಿ ಕಾರ್ಯದರ್ಶಿ ಮಹೇಂದ್ರ ಜೈನ್ ಮತ್ತು ಬಿಬಿಎಂಪಿ ಜಂಟಿ ಆಯುಕ್ತ ಸರ್ಫಾರಾಜ್ ಖಾನ್ ಅವರು ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಬೇಷರತ್ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಕೆಲ ದಿನಗಳ ಹಿಂದಷ್ಟೇ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ. 
ನಗರದ ಜಮ ಮೂಲಗಳಿಂದ 75 ಮೀಟರ್ ಅಂತರದಲ್ಲಿ ಕಟ್ಟಡ ಕಾಮಗಾರಿ ನಡೆಸುವಂತಿಲ್ಲ ಎಂದು ಕಳೆದ ವರ್ಷ ಹಸಿರು ನ್ಯಾಯಾಧೀಕರಣ ತೀರ್ಪು ನೀಡಿತ್ತು. ಈ ಆದೇಶದ ಬಗ್ಗೆ ಬಿಬಿಎಂಪಿ ಆಯುಕ್ತರು ಕೆಲ ದಿನಗಳ ಹಿಂದಷ್ಟೇ ಸುತ್ತೋಲೆಯೊಂದರನ್ನು ಹೊರಡಿಸಿ, ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಡಾವಣೆ ವಿನ್ಯಾಯಾ ಅಂತಿಮಗೊಂಡು ನಿರ್ಮಾಣ ಮಾಡಲಾಗಿರುವ ಬಡಾವಣೆಗಳ ಕಟ್ಟಗಳಿಗೆ ನ್ಯಾಯಾಧೀಕರಣದ ತೀರ್ಪು ಅನ್ವಯವಾಗುವುದಿಲ್ಲ ಎಂದು ಹೇಳಿದ್ದರು. ಹಸಿರು ನ್ಯಾಯಾಧೀಕರಣ ಒಂದು ಅರೆ ನ್ಯಾಯಿಕ ಸಂಸ್ಥೆಯಾಗಿದ್ದು, ಇದಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರವಿಲ್ಲ ಎಂದು ಸುತ್ತೋಲೆಯಲ್ಲಿದಾಖಲಿಸಿತ್ತು. ನ್ಯಾಯಾಧೀಕರಣದ ನ್ಯಾಯಾಧೀಶರ ಕಣ್ಣು ಮತ್ತಷ್ಟು ಕೆಂಪಗಾಗುವಂತೆ ಮಾಡಿತ್ತು. 
ಇದರಂತೆ ನಿನ್ನೆ ನಡೆದ ವಿಚಾರಣೆ ವೇಳೆ ಸುತ್ತೋಲೆ ಹೊರಡಿಸಿದ ಅಧಿಕಾರಿಗಳು ಮುಂದಿನ ವಿಚಾರಣೆ ವೇಳೆ ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡಬೇಕು. ಒಂದು ಅಧಿಕಾರಿಗಳ ವಿವರಣೆ ಸಮಾಧಾನ ತರಲಿದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಚಾಲನೆ ನೀಡುತ್ತೇವೆ. ಅವರು ಜೈಲಿಗೂ ಹೋಗಬೇಕಾಗಬಹುದು ಎಂದು ಎಚ್ಚರಿಕೆ ನೀಡಿತ್ತು. 
SCROLL FOR NEXT