ಬೆಂಗಳೂರು: ಮಲ್ಟಿಫ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರವನ್ನು 200ಕ್ಕೆ ನಿಗದಿ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದರು.
ಟಿಕೆಟ್ ದರ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ಆದೇಶಕ್ಕೆ ಅಂಕಿತ ಹಾಕಿದ್ದು, ಗುರುವಾರ ಬೆಳಗ್ಗೆ ಆದೇಶದ ಪ್ರಪತಿ ತಮ್ಮ ಕೈ ಸೇರಲಿದ್ದೂ, ತಕ್ಷಣದಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಮಲ್ಟಿಪ್ಲೆಕ್ಸ್ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವನ್ನು ಕಡ್ಡಾಯಗೊಳಿಸುವ ಆದೇಶವೂ ಅನುಷ್ಠಾನವಾಗಿದೆ. ಮಧ್ಯಾಹ್ನ 1.30, 4.30 ಮತ್ತು ಸಂಜೆ 7.30ರ ಪ್ರೈಮ್ ಟೈಮ್ನಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.
ಬಾಹುಬಲಿ ಸೇರಿದಂತೆ ಪ್ರೇಕ್ಷಕರು ಈಗಾಗಲೇ ರು 200ಕ್ಕಿಂತ ಹೆಚ್ಚಿನ ಹಣ ನೀಡಿ ಮುಂಗಡ ಟಿಕೆಟ್ ಖರೀದಿಸಿದ್ದರೆ ಚಿತ್ರಮಂದಿರದ ಮಾಲೀಕರಿಂದ ಆ ಹೆಚ್ಚುವರಿ ಹಣವನ್ನು ವಾಪಸ್ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಈಗಾಗಲೇ ಮುಂಡಗವಾಗಿ ಬುಕ್ ಆಗಿರುವ ಟಿಕೆಟ್ಗಳಿಗೆ ಪಡೆದುಕೊಂಡಿರುವ ಹೆಚ್ಚುವರಿ ಹಣವನ್ನು ಪ್ರೇಕ್ಷಕರಿಗೆ ಹಿಂತಿರುಗಿಸಬೇಕು. ಇಲ್ಲದಿದ್ದರೆ ಕಾನೂನಾತ್ಮಕ ಕ್ರಮ ಎದುರಿಸಬೇಕಾಗುತ್ತದೆ’ ಎಂದೂ ಗೋವಿಂದು ತಿಳಿಸಿದರು.
ಮಲ್ಟಿಪ್ಲೆಕ್ಸ್ಗಳಲ್ಲಿ ಗರಿಷ್ಠ ಮಾರುಕಟ್ಟೆ ಬೆಲೆಗಿಂತ ಹಲವು ಪಟ್ಟು ಹೆಚ್ಚಿನ ಬೆಲೆಗೆ ತಿನಿಸು ಮತ್ತು ಪಾನೀಯಗಳನ್ನು ಮಾರಾಟ ಮಾಡುವುದೂ ನಿಲ್ಲಬೇಕು, ಪಾಪ್ ಕಾರ್ನ್ ಮತ್ತಿತ್ತರ ತಿನಿಸುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆ ದರದ ಮೇಲೆ ಎರಡು ರೂ ಮೂರು ನಿರ್ವಹಣಾ ವೆಚ್ಚ ವಿಧಿಸಲಿ, ಆದರೆ ಅದನ್ನು ಬಿಟ್ಟು 50 ರಿಂದ 100 ರು ಅಧಿಕವಾಗಿ ಗೆ ಮಾರಾಟ ಮಾಡಲಾಗುತ್ತಿದೆ. ಈ ಹಗಲು ದರೋಡೆ ನಿಲ್ಲದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.