ಬೆಂಗಳೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗಲಿದೆ ಎಂದು ಮೂಲಗಳು ತಿಳಿಸಿವೆ.
2018ರ ವಿಧಾನ ಸಭೆ ಚುನಾವಣೆಯಲ್ಲಿ ಡಿಕೆಶಿ ಅವರನ್ನು ಬಗ್ಗು ಬಡಿಯಲು ಬಿಜೆಪಿ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚಿತವಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗುರುವಾರ ಮಧ್ಯಾಹ್ನ ನಡೆಸಿದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಲಾಗಿದೆ.
ಕೇಂದ್ರದ ಎಜೆನ್ಸಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವ ಬಿಜೆಪಿಗೆ ಎದಿರೇಟು ನೀಡಲು ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸುತ್ತಿದೆ.
ಎರಡನೇ ದಿನ ನಡೆದ ಐಟಿ ದಾಳಿ ವೇಳೆ, ಅಧಿಕಾರಿಗಳು ಅಪಾರ ಸಂಪತ್ತು ಸೀಜ್ ಮಾಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ. ಆದರೆ ಎಷ್ಟು ಪ್ರಮಾಣದ ಹಣ ವಶ ಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟವಾಗಿಲ್ಲ.
ಗೋವಾ ಮತ್ತು ಕರ್ನಾಟಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಡಿಕೆಶಿ ಆಸ್ತಿ-ಪಾಸ್ತಿ ಬಗ್ಗೆ ಮಾಹಿತಿ ನೀಡಲಿದೆ ಎನ್ನಲಾಗಿದೆ. ಎರಡನೇ ದಿನವೂ ಡಿಕೆಶಿಯ ಸದಾಶಿವನಗರದ ಮನೆ ಹಾಗೂ ಅವರ ಸಂಬಂಧಿಗಳ ಮನೆಯ ಮೇಲೆ ದಾಳಿ ಮುಂದುವರಿದಿದೆ.
ಡಿಕೆಶಿ ಸಹೋದರಿ ಪದ್ಮಾ, ಶಿವಕುಮಾರ್ ಮಾವ ತಿಮ್ಮಯ್ಯ ಸೇರಿದಂತೆ ಸಚಿವರ ಆಪ್ತರ ಮನೆ ಮೇಲೆ ದಾಳಿ ಮುಂದುವರಿದಿದೆ. ಬೆಂಗಳೂರು ಹೊರತುಪಡಿಸಿ, ಶಿವಕುಮಾರ್ ಗೆ ಸೇರಿದ ಆಸ್ತಿ ಮತ್ತು ಕಚೇರಿಗಳಿರುವ ಹಾಸನ ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲೂ ದಾಳಿ ನಡೆಯಿತು.
ಶಿವಕುಮಾರ್ ಅವರ ಮನೆಗೆ ಅಧಿಕಾರಿಗಳು ದಿನವಿಡೀ ನಿರ್ಬಂಧ ಹೇರಿದ್ದರು. ಸಿಆರ್ ಪಿಎಫ್ ಸೈನಿಕರನ್ನು ಮನೆಯ ಹೊರಗಿನ ಭದ್ರತೆಗಾಗಿ ನಿಯೋಜಿಸಲಾಗಿದೆ.
ಮನೆಯ ಒಳಗೆ ಸುರಕ್ಷಿತವಾಗಿದ್ದ ಹಲವು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸೇಫ್ ಲಾಕರ್ ಒಪನ್ ಮಾಡಿಸಲು ಅಧಿಕಾರಿಗಳು ಕೀ -ಮೇಕರ್ ಗಳನ್ನು ಡಿಕೆಶಿ ಮನೆಗೆ ಕರೆಸಿದ್ದಾರೆ ಎನ್ನಲಾಗಿದೆ.
ಮೊದಲ ದಿನದ ದಾಳಿಯ ವೇಳೆ ಆದಾಯ ತೆರಿಗೆ ಅಧಿಕಾರಿಗಳು ಸೀಜ್ ಮಾಡಿದ್ದ ಮಾಹಿತಿಗಳ ಬಗ್ಗೆ ನಡೆಸಿದ್ದ ಮಹಜರ್ ವರದಿ ಸಚಿವರ ಆಪ್ತರಿಂದ ಸೋರಿಕೆಯಾಗಿವೆ ಎಂದು ಹೇಳಲಾಗಿದೆ. ಸೋರಿಕೆಯಾಗಿದ್ದ 22 ಪುಟಗಳ ಮಹಜರ್ ವರದಿಯನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos