ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಗೋಡೆಗಳ ಮೇಲೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಹುತಾತ್ಮ ಯೋಧರ ಭಾವಚಿತ್ರಗಳನ್ನು ಹಾಕುವ (ವಾಲ್ ಆಫ್ ಹೀರೋಸ್) ಅಭಿಯಾನಕ್ಕೆ ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ಗವರ್ನರ್ ವಜುಭಾಯಿ ವಾಲಾ ನಿನ್ನೆ ಚಾಲನೆ ನೀಡಿದರು.
ನಿನ್ನೆ ರಾಜಭವನದಲ್ಲಿ ರಕ್ಷಣಾ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ರಾಜ್ಯಪಾಲರು 21 ಪರಮ ವೀರ ಚಕ್ರ ಪುರಸ್ಕೃತ ಹುತಾತ್ಮ ಸೈನಿಕರ ಭಾವಚಿತ್ರಗಳನ್ನು ಒಳಗೊಂಡ ಸಿಡಿಯನ್ನು ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಿಗೆ ನೀಡಿದರು.
ವಿದ್ಯಾ ವೀರ್ತ ಅಭಿಯಾನದಡಿ ದೇಶಾದ್ಯಂತ 150 ವಿಶ್ವವಿದ್ಯಾಲಯಗಳಲ್ಲಿ ಇದನ್ನು ಆರಂಭಿಸಲಾಗಿದೆ. ಕರ್ನಾಟಕದ ಪ್ರಮುಖ ಸೈನಿಕರು ಮತ್ತು ಹುತಾತ್ಮರ ಪಟ್ಟಿಯನ್ನು ನೀಡುವಂತೆ ರಾಜ್ಯದ ವಿಶ್ವವಿದ್ಯಾಲಯಗಳಿಗೆ ನೀಡಲಾಗಿದೆ.
ವಿದ್ಯಾ ವೀರ್ತ ಅಭಿಯಾನದ ಅಧ್ಯಕ್ಷ ತರುಣ್ ವಿಜಯ್ ಮಾತನಾಡಿ, ಕರ್ನಾಟಕ ರಾಜ್ಯ ಈ ವಿಷಯದಲ್ಲಿ ಮುಂದಾಳತ್ವ ವಹಿಸಲಿ, ಹನುಮಂತಪ್ಪ ಕೊಪ್ಪದ, ಸಂದೀಪ್ ಉನ್ನಿಕೃಷ್ಣನ್ ರಂತಹ ಹೀರೋಗಳ ಭಾವಚಿತ್ರಗಳನ್ನು ವಿಶ್ವವಿದ್ಯಾಲಯದ ಗೋಡೆಗಳಲ್ಲಿ ಹಾಕುವ ಮೂಲಕ ಇಂದಿನ ಯುವ ಜನಾಂಗಕ್ಕೆ ಅವರನ್ನು ಸ್ಪೂರ್ತಿ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ, ಓದಿನಲ್ಲಿ ಶೇಕಡಾ 49 ಅಂಕ ಗಳಿಸಿದ ವಿದ್ಯಾರ್ಥಿ ದೇಶಸೇವೆ ಮಾಡಿದವನು ಶೇಕಡಾ 95 ಅಂಕ ಪಡೆದು ದೇಶದ ಬಗ್ಗೆ ಒಂಚೂರು ಯೋಚಿಸದವನಿಗಿಂತ ಉತ್ತಮ. ದೇಶಕ್ಕಾಗಿ ಕೆಲಸ ಮಾಡಲು ಸಿದ್ದವಿರುವವರು ಭ್ರಷ್ಟರಾಗುವುದಿಲ್ಲ ಎಂದರು.
ಉಪ ಕುಲಪತಿಗಳಿಗೆ ರಾಜ್ಯಪಾಲರ ಕರೆ: ಅಲ್ಲಿದ್ದ ವಿಶ್ವ ವಿದ್ಯಾಲಯಗಳ ಉಪ ಕುಲಪತಿಗಳಿಗೆ ಮೂರು ಸಲ ಭಾರತ್ ಮಾತಾ ಕಿ ಜೈ ಎಂದು ಹೇಳುವಂತೆ ರಾಜ್ಯಪಾಲರು ಸೂಚಿಸಿದರು. ಅದಕ್ಕೆ ಕೆಲವರು ಮಾತ್ರ ಸಣ್ಣದಾಗಿ ಹೇಳಿದಾಗ, ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ನಿಮಗೇ ಸ್ವರವಿಲ್ಲದಿದ್ದರೆ ದೇಶಕ್ಕಾಗಿ ವಿದ್ಯಾರ್ಥಿಗಳು ಧ್ವನಿಯೆತ್ತುವಂತೆ ನೀವು ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos