ಧಾರವಾಡದಲ್ಲಿ ಕಾರ್ಗಿಲ್ ಸ್ತೂಪವನ್ನು ಸ್ವಚ್ಛಗೊಳಿಸುತ್ತಿರುವ ಚಂದ್ರಶೇಖರ್ ಎಸ್ ಅಮಿನ್ ಗಡ
ಧಾರವಾಡ: ಮಿಲಿಟರಿ ಅಥವಾ ರಕ್ಷಣಾ ಇಲಾಖೆ ಜೊತೆ ಯಾವುದೇ ಸಂಬಂಧ ಹೊಂದಿಲ್ಲದಿದ್ದರೂ ಇವರನ್ನು ಊರವರೆಲ್ಲಾ ಗುರುತಿಸುವುದು ಮಿಲಿಟರಿ ಮ್ಯಾನ್ ಎಂದು. ದೇಶದ ಗಡಿ ಕಾಯುವ ವೀರ ಯೋಧರು ಮತ್ತು ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರ ಮೇಲಿನ ಇವರ ಗೌರವ, ಭಕ್ತಿಯನ್ನು ಕಂಡು ಜನ ಹೀಗೆ ಕರೆಯುತ್ತಾರೆ.
ಇವರು ಧಾರವಾಡದ ಚಂದ್ರಶೇಖರ್ ಎಸ್.ಅಮೀನ್ ಗಡ. ಮೂಲತಃ ಉದ್ಯಮಿ. ತಮ್ಮ ವ್ಯಾಪಾರ, ವಹಿವಾಟಿನಲ್ಲಿ ಎಷ್ಟೇ ಬ್ಯುಸಿಯಿದ್ದರೂ ಕೂಡ ಪ್ರತಿದಿನ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಕಾರ್ಗಿಲ್ ಸ್ತೂಪವನ್ನು ಸ್ವಚ್ಛಗೊಳಿಸಿ ಹೋಗುತ್ತಾರೆ.
74ರ ಇಳಿ ವಯಸ್ಸಿನ ಚಂದ್ರಶೇಖರ್ ಅವರಿಗೆ ಯೌವ್ವನದಲ್ಲಿ ಭಾರತೀಯ ಸೇನೆಗೆ ಸೇರುವ ಬಯಕೆಯಿತ್ತಂತೆ. ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಆಯ್ಕೆ ಸಮಿತಿಯು ಅವರು ಶಾರೀರಿಕವಾಗಿ ಅಸಮರ್ಥ ಎಂದು ಹೇಳಿ ತಿರಸ್ಕರಿಸುತ್ತಿತ್ತಂತೆ.ಸೇನೆಗೆ ಸೇರಲು ವಿಫಲರಾದರೂ ಕೂಡ ಮಿಲಿಟರಿ ಪಡೆ ಮೇಲಿನ ಅವರ ಅಭಿಮಾನ ಕಡಿಮೆಯಾಗಲಿಲ್ಲ. ಸೈನಿಕರು ಮತ್ತು ಅವರ ಕುಟುಂಬದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ.
1999ರಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಗೆದ್ದಾಗ ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಒಂದು ಸ್ಮಾರಕವನ್ನು ನಿರ್ಮಿಸಲಾಯಿತು. ಹುತಾತ್ಮ ಸೈನಿಕರನ್ನು ಸ್ಮರಿಸಲು ಕಟ್ಟಿದ ಸ್ಮಾರಕಕ್ಕೆ ಕಾರಣೀಭೂತರಲ್ಲಿ ಅಮಿನ್ ಗಡ ಕೂಡ ಒಬ್ಬರು. ಕಳೆದ 17 ವರ್ಷಗಳಿಂದ ಪ್ರತಿದಿನ ಕಾರ್ಗಿಲ್ ಸ್ತೂಪಕ್ಕೆ ಹೋಗಿ ಅಲ್ಲಿ ಸುತ್ತಮುತ್ತ ಸ್ವಚ್ಛಗೊಳಿಸುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ಕಳೆದು ಯೋಗ, ಧ್ಯಾನ ಮಾಡಿ ಮನೆಗೆ ಹಿಂತಿರುಗುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದ ನಂತರ ನಾವು ಕೆಲ ಸ್ನೇಹಿತರು ಜೊತೆಗೂಡಿ ಕಲಾ ಭವನದಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಿಸಿದೆವು. ಅಲ್ಲಿ ನಾವು ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ಆಚರಿಸಿದೆವು. ಸಮಿತಿ ಮುಖಾಂತರ ನಾವು ಕಾರ್ಗಿಲ್ ಸ್ಮಾರಕ ಸ್ಥಾಪಿಸಲು ಮನವಿ ಮಾಡಿಕೊಂಡೆವು. 2000ನೇ ಇಸವಿಯಲ್ಲಿ ಸರ್ಕಾರದ ನೆರವಿನೊಂದಿಗೆ ಕಾರ್ಗಿಲ್ ಸ್ತೂಪ ನಿರ್ಮಿಸಿದೆವು ಎನ್ನುತ್ತಾರೆ.
ಕಳೆದ 17 ವರ್ಷಗಳಲ್ಲಿ ಕೇವಲ 20 ದಿನಗಳು ಮಾತ್ರ ಅವರು ಕಾರ್ಗಿಲ್ ಸ್ತೂಪಕ್ಕೆ ಭೇಟಿ ನೀಡಲಿಲ್ಲವಂತೆ. ಅನಾರೋಗ್ಯ ಅಥವಾ ಮನೆಯಲ್ಲಿ ಇಲ್ಲದ ದಿವಸ ಹೋಗಲು ಸಾಧ್ಯವಾಗಿರಲಿಲ್ಲವಂತೆ. ಮನೆಗೆ ರಾತ್ರಿ ಎಷ್ಟೇ ತಡವಾಗಿ ಬಂದರೂ ಕಾರ್ಗಿಲ್ ಸ್ತೂಪಕ್ಕೆ ಹೋಗಿ ಅಲ್ಲಿ ಸ್ವಲ್ಪ ಹೊತ್ತು ಇದ್ದು ಬರದೆ ಇರುವುದಿಲ್ಲವಂತೆ. ಸ್ಮಾರಕಕ್ಕೆ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹೀರೇಮಠ್ ಬಣ್ಣ ಬಳಿಸಿದ್ದಾರೆ ಎನ್ನುತ್ತಾರೆ.
ಈ ಕಾರ್ಗಿಲ್ ಸ್ತೂಪದಲ್ಲಿ ಕರ್ನಾಟಕದ 13 ಮಂದಿ ಹುತಾತ್ಮರ ಹೆಸರುಗಳನ್ನು ಕೆತ್ತಲಾಗಿದೆ.ಜನರಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಮತ್ತು ಜನರಲ್ ಜಿ.ಜಿ.ಬೆವೂರ್ ಅವರ ಮೂರ್ತಿಗಳನ್ನು ಸದ್ಯದಲ್ಲಿಯೇ ಇಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಇದುವರೆಗೆ ಇಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಿಗೆ ರಾಜಕೀಯ ಮುಖಂಡರನ್ನು ಆಹ್ವಾನಿಸಿಲ್ಲ ಎನ್ನುತ್ತಾರೆ ಅಮಿನ್ ಗಢ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos