ರಾಜ್ಯ

ಡಾ. ಅಮೃತ ಸೋಮೇಶ್ವರ ಗೆ ಭಾಷಾ ಸಮ್ಮಾನ ಗೌರವ

Raghavendra Adiga
ಹೊಸದಿಲ್ಲಿ: ತುಳು ಭಾಷೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಪರಿಗಣಿಸಿ ಪ್ರಖ್ಯಾತ ತುಳು ವಿದ್ವಾಂಸ ಮತ್ತು ಬರಹಗಾರ ಡಾ. ಅಮೃತ್‌ ಸೋಮೇಶ್ವರ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್‌ ಗೌರವ ನೀಡಲಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಕಟಣೆಯಲ್ಲಿಈ ವಿಚಾರ ವರದಿಯಾಗಿದ್ದು ಪ್ರಶಸ್ತಿಯು 1 ಲಕ್ಷ ರೂ. ನಗದು , ತಾಮ್ರಪತ್ರ ಹೊಂದಿರುತ್ತದೆ. ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪ್ರದಾನ ಮಾಡಲಿದ್ದಾರೆ.
ಈ ಪ್ರಶಸ್ತಿಗಾಗಿ ಡಾ. ಸೋಮೇಶ್ವರ್‌ ಅವರ ಹೆಸರನ್ನು ಡಾ. ಚಿನ್ನಪ್ಪಗೌಡ, ಪೊ›. ಚಂದ್ರಕಲಾ ನಂದಾವರ್‌ ಮತ್ತು ಜಾನಕಿ ಬ್ರಹ್ಮಾವರ್‌ ಅವರನ್ನೊಳಗೊಂಡ ಆಯ್ಕೆ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ತುಳು ಭಾಷೆ ಸಂಶೋಧನೆ ಮತ್ತು ಭಾಷಾ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಡಾ. ಸೋಮೇಶ್ವರ್‌ 1935ರಲ್ಲಿ  ಜನಿಸಿದರು. ಅವರು ತಮ್ಮ ಕೆಲ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೃತಿಗಳಾದ  'ಪಡ್ತಾನಾಸ' ಮತ್ತು 'ಭಮಕುಮಾರ ಸಂಧಿ' ಕನ್ನಡಕ್ಕೆ ಅನುವಾದಗೊಂಡಿವೆ. ಏಳು ತುಳು ನಾಟಕಗಳನ್ನು ಬರೆದಿರುವ ಸೋಮೇಶ್ವರ್‌ ಅವರ 'ತಂಬಿಲಾ' ಮತ್ತು 'ರಂಗಿತಾ' ಕಾವ್ಯ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತುಳ್ಳೂರು ಕನಕ ಅನ್ನಯ್ಯ ಶೆಟ್ಟಿ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಈಗಾಗಲೇ ಸೋಮೇಶ್ವರ್‌ ಅವರಿಗೆ ಲಭಿಸಿದೆ.
ಡಾ. ಸೋಮೇಶ್ವರ್‌ ಅವರ ಜತೆಗೆ ಪ್ರೊ. ಮಧುಕರ್‌ ಅನಂತ್‌ ಮೆಹಂದಳೆ ಅವರನ್ನು ಶಾಸ್ತ್ರೀಯ ಮತ್ತು ಮಧ್ಯಯುಗೀನ ಸಾಹಿತ್ಯ ವಿಭಾಗದಲ್ಲಿ 2016ನೇ ಸಾಲಿನ ಭಾಷಾ ಸಮ್ಮಾನ್‌ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
SCROLL FOR NEXT