ಬೆಂಗಳೂರು: ಪತ್ರಕರ್ತರೊಬ್ಬರ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ 'ಹಾಯ್ ಬೆಂಗಳೂರು' ಪತ್ರಿಕೆ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರನ್ನು ಶುಕ್ರವಾರ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮತ್ತೊಬ್ಬ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ರವಿ ಬೆಳಗೆರೆ ಅವರನ್ನು ಇಂದು ಮಧ್ಯಾಹ್ನ ಸಿಸಿಬಿ ಪೊಲೀಸರು ಬೆಂಗಳೂರಿನ ಪದ್ಮನಾಭನಗರದ ಕಚೇರಿಯಲ್ಲಿ ಬಂಧಿಸಿದ್ದಾರೆ.
ಶಾರ್ಪ್ ಶೂಟರ್ ಶಶಿಧರ್ ಮುಂಡೇವಾಡಗಿ ಹಾಗೂ ಸಹಚರರು ವಿಚಾರಣೆ ವೇಳೆ ಈ ವಿಷಯ ಬಾಯ್ಬಿಟ್ಟಿದ್ದು, ಹಾಯ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುನಿಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲಲು ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರು ಎಂದು ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಬಂಧಿತನಾಗಿದ್ದ ತಾಹೀರ್ ಹುಸೇನ್ ಎಂಬಾತ ನೀಡಿದ್ದ ಮಾಹಿತಿ ಮೇರೆಗೆ ಮತ್ತೊಬ್ಬ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ವಿಜಯಪುರ ಮೂಲದ ಶಶಿಧರ್, ರವಿ ಬೆಳಗೆರೆ ಅವರು 30 ಲಕ್ಷ ರು ಸುಪಾರಿ ನೀಡಿ, ಸುನಿಲ್ ಹೆಗ್ಗರವಳ್ಳಿಯನ್ನು ಕೊಲ್ಲಲು ಸೂಚಿಸಿದ್ದರು ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ರವಿ ಬೆಳಗೆರೆ ವಿರುದ್ಧ ಐಪಿಸಿ ಸೆಕ್ಷನ್ 307, 120(ಬಿ) ಅಡಿ ಎಫ್ ಐಆರ್ ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.