ಹುಬ್ಬಳ್ಳಿ: ನಟ ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ಕ್ಕೆ ಆಟೊರಿಕ್ಷಾ ಚಿಹ್ನೆ ಲಭಿಸಿದೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಉಪೇಂದ್ರ ಈ ವಿಷಯ ಸ್ಪಷ್ಠಪಡಿಸಿದ್ದಾರೆ.
"ನಮ್ಮ ಪಕ್ಷಕ್ಕೆ ಆಟೋ ರಿಕ್ಷಾ ಚಿನ್ಹೆ ಲಭಿಸಿದ್ದು ಆಟೋ ಎಂದರೆ ಎಲ್ಲರಿಗೂ ಶಂಕರ್ ನಾಗ್ ನೆನಪಾಗುತ್ತಾರೆ. ಅವರಿಗೆ ಕರ್ನಾಟಕದ ವಿಕಾಸದ ಕನಸಿತ್ತು. ನಮ್ಮ ನೆಚ್ಚಿನ ನಟನ ಕನಸನ್ನು ನಾವು ನನಸು ಮಾಡೋಣ." ಎಂದರು.
"ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ನಮ್ಮ ಪ್ರಜಾಕೀಯ ಕೆಲಸ ಮಾಡುತ್ತದೆ. ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳು ಚುನಾವಣೆಯಿಂದ ದೂರವಿರಬೇಕು.ಅಭಿವೃದ್ದಿ, ಆರೋಗ್ಯ, ಶಿಕ್ಷಣ, ಇಂತಹಾ ಸಾಮಾಜಿಕ ಕಳಕಳಿಯ ವಿಚಾರಗಳ ಸಲುವಾಗಿ ನಾನು ಕೆಲಸ ಮಾಡಲು ಮುಂದಾಗಿದ್ದೇನೆ. ನಾನು ಓರ್ವ ನಾಗರಿಕನಾಗಿ ಸುಮ್ಮನೆ ಕುಳಿತಿರಲು ಸಾದ್ಯವಿಲ್ಲ.
"ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ. ಅಭ್ಯರ್ಥಿಗಳ ಆಯ್ಕೆ, ಅವರ ತಪ್ಪು ಒಪ್ಪುಗಳಿಗೆ ನಾನು ಹೊಣೆಯಾಗುತ್ತೇನೆ. ಇದಾಗಲೇ ಅಭ್ಯರ್ಥಿತನಕ್ಕಾಗಿ ಐನೂರು ಅರ್ಜಿಗಳು ಬಂದಿದೆ. ಸೂಕ್ತ ಅಭ್ಯರ್ಥಿಗಳ ಸಂದರ್ಶನ ಮಾಡಿ ಅಂತಿಮ ಆಯ್ಕೆ ನಡೆಸಲಾಗುತ್ತದೆ" ಉಪೇಂದ್ರ ಹೇಳಿದ್ದಾರೆ.
ಉಪೇಂದ್ರ ತಮ್ಮ ಪಕ್ಷದ ಚಿನ್ಹೆಯಾದ ಆಟೋ ರಿಕ್ಷಾದಲ್ಲಿಯೇ ಸುದ್ದೇಗೋಷ್ಠಿಗೆ ಆಗಮಿಸಿದ್ದು ವಿಶೇಷವಾಗಿತ್ತು.