ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ 8 ಸಾವಿರದ 797 ಕೋಟಿ ರೂಪಾಯಿ ವೆಚ್ಚದಲ್ಲಿ 1 ಲಕ್ಷದ 95 ಸಾವಿರದ 349 ಮನೆ ನಿರ್ಮಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಹಾಯಕ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸ್ವಂತ ಸೂರು ಇಲ್ಲದ ಬಡವರಿಗೆ ಮನೆ ನಿರ್ಮಿಸಲು ರಾಜ್ಯ ಸರಕಾರ ಪ್ರಸ್ತಾವನೆ ಕಳಿಸಿದರೆ ಕೇಂದ್ರ ಸರ್ಕಾರ ಅದನ್ನು ಪುರಸ್ಕರಿಸಲಿದೆ ಎಂದು ಹೇಳಿದರು.
`ಅಮೃತ್’ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಪ್ರಗತಿಗೆ ಸಮಾಧಾನ ವ್ಯಕ್ತಪಡಿಸಿರುವ ಅವರು, ನಗರ ಪ್ರದೇಶಗಳಲ್ಲಿ ಹಸಿರು ವಲಯ ಹೆಚ್ಚಿಸಿ ಮಾಲಿನ್ಯ ನಿಯಂತ್ರಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ 27 ನಗರಗಳಲ್ಲಿ ಅಮೃತ್ ಯೋಜನೆ ಜಾರಿಯಲ್ಲಿದ್ದು, ಇದಕ್ಕಾಗಿ ಕೇಂದ್ರ ಸರಕಾರ 4 ಸಾವಿರದ 953 ಕೋಟಿ ರೂಪಾಯಿ ಮೌಲ್ಯದ ಯೋಜನೆಗೆ ಅನುಮತಿ ನೀಡಿದೆ. ಜೊತೆಗೆ, 3 ಲಕ್ಷದ 64 ಸಾವಿರ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ 61 ಕೋಟಿ ರೂಪಾಯಿ ಒದಗಿಸಿದೆ ಎಂದು ಪುರಿ ತಿಳಿಸಿದರು.
ವಾಣಿಜ್ಯ ಮತ್ತು ವಸತಿ ಸೌಕರ್ಯಕ್ಕಾಗಿ 2030ರ ವೇಳೆಗೆ 700ರಿಂದ 900 ದಶಲಕ್ಷ ಚದರ ಮೀಟರ್ನಷ್ಟು ಸ್ಥಳಾವಕಾಶ ಒದಗಿಸಬೇಕಾಗಿದೆ; ಇದರ ಜೊತೆಗೆ, ದೇಶದ ರಿಯಲ್ ಎಸ್ಟೇಟ್ ವಲಯವು ಅಕ್ರಮ ಚಟುವಟಿಕೆಗಳನ್ನು ನಡೆಸದಂತೆ ಅಂಕುಶ ಹಾಕಬೇಕಾದ ಅಗತ್ಯವಿದೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos