ಬೆಂಗಳೂರು: ತಮ್ಮ ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಹಿರಿಯ ಪತ್ರಕರ್ತ ಹಾಗೂ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರಿಗೆ ಸಿಟಿ ಸಿವಿಲ್ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ. ಅವಧಿಯನ್ನು ಡಿಸೆಂಬರ್ 21ರವರೆಗೆ ವಿಸ್ತರಣೆ ಮಾಡಲಾಗಿದೆ.
ರವಿ ಬೆಳಗೆರೆ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 65ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಮಧುಸೂದನ್ ಬಿ ಅವರು, ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ರವಿ ಬೆಳಗೆರೆ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಡಿಸೆಂಬರ್ 21ರವರೆಗೆ ಷರತ್ತು ಬದ್ದ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ತೀವ್ರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರವಿ ಬೆಳಗೆರೆ ಅವರನ್ನು ಜಯದೇಶ ಆಸ್ಪತ್ರೆಯ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ಮುಂದುವರೆದಿದೆ.
ರವಿ ಬೆಳಗೆರೆ ಪರ ವಕೀಲ ದಿವಾಕರ್ ಅವರು ರವಿ ಬೆಳಗೆರೆ ವಿರುದ್ಧ ಪೊಲೀಸರು ಮಾಡಿರುವ ಆರೋಪಗಳು ಸುಳ್ಳು. ಪೊಲೀಸರು ರವಿ ಬೆಳಗೆರೆ ಮನೆ ಮೇಲೆ ದಾಳಿ ನಡೆಸಿದಾಗ 2 ಗನ್ ಸಿಕ್ಕಿವೆ ಎಂದು ಹೇಳುತ್ತಾರೆ. ವಶಪಡಿಸಿಕೊಂಡಿರುವ ಗನ್ ಗಳು ಪರವಾನಗಿ ಪಡೆದಿವೆ. ಮನೆಯಲ್ಲಿ ಸಿಕ್ಕ ಗುಂಡುಗಳು ಕಾನೂನುಬದ್ಧವಾಗಿ ಪಡೆದಿದ್ದವು. ಒಂದು ಪಿಸ್ತೂಲ್, 93 ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವುಗಳನ್ನು ಕಾನೂನು ಪ್ರಕಾರವೇ ಖರೀದಿಸಲಾಗಿದೆ ಎಂದು ವಾದ ಮಂಡಿಸಿದ್ದರು.