ಮೈಸೂರು: ಮಸಾಜ್ ಸೆಂಟರ್ ನಲ್ಲಿ ನನಗೆ ಕನ್ನಡದ ಹಾಸ್ಯ ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೌರ್ಜನ್ಯಕ್ಕೆ ಒಳಗಾದ ಯುವತಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.
ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ಸ್ಪಾ ಮಾಲೀಕ ರಾಜೇಶ್ ನನ್ನು ಬಂಧಿಸಿದ್ದು ಓರ್ವ ಯುವತಿಯನ್ನು ರಕ್ಷಿಸಿದ್ದರು. ಈ ವೇಳೆ ಯುವತಿ ಖ್ಯಾತ ಹಾಸ್ಯ ನಟರು ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಹೇಳಿಕೆ ನೀಡಿದ್ದಳು. ಅಂತೆ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಯುವತಿ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ವಿರುದ್ಧ ದೂರು ನೀಡಿದ್ದಾರೆ.
ಇನ್ನು ನ್ಯಾಯಾಧೀಶರ ಮುಂದೆ ಕಣ್ಣೀರಿಡುತ್ತಾ ಹೇಳಿಕೆ ನೀಡಿದ ಯುವತಿ ನಟರ ಜತೆ ಅಧಿಕಾರಿಗಳು ಸಹ ತೊಂದರೆ ನೀಡುತ್ತಿದ್ದರು ಎಂದು ಹೇಳಿದಳು. ಹುಡುಗಿಯ ಹೇಳಿಕೆಯನ್ನು ದಾಖಲಿಸಿಕೊಂಡು ನ್ಯಾಯಾಧೀಶರು ಮಸಾಜ್ ಸೆಂಟರ್ ಮಾಲೀಕ ರಾಜೇಶ್ ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದ್ದಾರೆ.
ಆರೋಪ ನಿರಾಕರಿಸಿದ ಮಂಡ್ಯ ರಮೇಶ್
ಇನ್ನು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಆರೋಪವನ್ನು ಹಾಸ್ಯ ನಟ ಮಂಡ್ಯ ರಮೇಶ್ ಅವರು ಅಲ್ಲಗಳೆದಿದ್ದಾರೆ. ತಮಗೂ ಈ ಪ್ರಕರಣಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಈ ಆಪಾದನೆ ನನಗೆ ನೋವು ಉಂಟು ಮಾಡಿದೆ. ನನ್ನ ಜವಾಬ್ದಾರಿ ಕೆಲಸ ಏನು ಎನ್ನುವ ಬಗ್ಗೆ ನನಗೆ ಅರಿವಿದೆ ಎಂದರು. ಇನ್ನು ಪಾರ್ಲರ್ ಉದ್ಘಾಟನೆಗೆ ನಾನು ಹೋಗಿದ್ದೆ ಅಷ್ಟೇ. ನನ್ನ ಮೇಲೆ ಆರೋಪ ಮಾಡುತ್ತಿರುವ ಯುವತಿಗೂ ನನಗೂ ಯಾವುದೇ ರೀತಿಯ ಪರಿಚಯ ಇಲ್ಲ. ಈ ಯುವತಿ ಆರೋಪ ಮಾಡುತ್ತಿರುವುದು ಸುಳ್ಳು, ಇದರ ಹಿಂದೆ ಯಾವುದೋ ಒತ್ತಡ ಇರಬಹುದು ಎಂದು ಹೇಳಿದ್ದಾರೆ.
ಯುವತಿ ದೂರಿನಲ್ಲಿ ಇಬ್ಬರು ಸ್ಯಾಂಡಲ್ ವುಡ್ ಸ್ಟಾರ್ ನಟರ ಹೆಸರು
ಇನ್ನು ಪೊಲೀಸರಿಗೆ ದೂರು ನೀಡಿರುವ ಯುವತಿ ದೂರಿನಲ್ಲಿ ತನ್ನ ಮೇಲಾದ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, "ನನ್ನನ್ನು ಮಹಿಳೆಯರಿಗೆ ಮಸಾಜ್ ಮಾಡಲು ಎಂದು ಇಲ್ಲಿಗೆ ಕರೆ ತರಲಾಗಿತ್ತು. ನಂತರದ ಕೆಲವು ದಿನಗಳಲ್ಲಿ ಪುರುಷರಿಗೆ ಮಸಾಜ್ ಮಾಡುವಂತೆ ನನ್ನ ಒತ್ತಡ ಹಾಕಲಾಯಿತು. ಒಬ್ಬಬ್ಬ ಪುರುಷರು ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಸ್ಪಾ ಮಾಲೀಕ ರಾಜೇಶ್ ಗೆ ತಿಳಿಸಿದರೆ ಆತ ಅದಕ್ಕೆ ಸಹಕರಿಸಬೇಕೆಂದು ಹೇಳಿದ್ದಾನೆ. ಈ ವೇಳೆ ಸ್ಪಾಗೆ ಸ್ಯಾಂಡಲ್ವುಡ್ ಇಬ್ಬರೂ ಹಾಸ್ಯ ನಟರಿಬ್ಬರು ಬಂದಿದ್ದು, ಅವರಿಗೂ ನಾನು ಮಸಾಜ್ ಮಾಡಿದ್ದೇನೆ. ಆದರೆ ನನಗೆ ಅನ್ಯ ಪುರುಷರೊಂದಿಗೆ ಲೈಂಗಿಕವಾಗಿ ಸಹಕರಿಸಲು ಇಷ್ಟವಿಲ್ಲ ಎಂದು ಯುವತಿ ಪೊಲೀಸರಿಗೆ ಲಿಖಿತ ದೂರಿನಲ್ಲಿ ತಿಳಿಸಿದ್ದಾಳೆ.
ಪೊಲೀಸ್ ಮೂಲಗಳು ತಿಳಿಸಿರುವಂತೆ ಸಂತ್ರಸ್ಥ ಯುವತಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳ್ಳಿಯೊಂದರ ನಿವಾಸಿ ಎಂದು ತಿಳಿದು ಬಂದಿದ್ದು, ಸಿನಿಮಾಗಳಲ್ಲಿ ಅವಕಾಶ ಕೊಡಿಸುತ್ತೇವೆ ಎಂದು ನಂಬಿಸಿ ಸ್ಪಾ ಮಾಲೀಕ ರಾಜೇಶ್ ಆಕೆಯನ್ನು ಮೈಸೂರಿಗೆ ಕರೆತಂದಿದ್ದನಂತೆ. ಅಲ್ಲದೆ ಸಿನಿಮಾದಲ್ಲಿ ಅವಕಾಶ ಸಿಗುವರೆಗೂ ಸ್ಪಾ ನಲ್ಲಿ ಫ್ರೀಯಾಗಿ ಕೆಲಸ ಮಾಡಬೇಕೆಂದು ಷರತ್ತು ವಿಧಿಸಲಾಗಿತ್ತು. ರಾಜೇಶ್ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos