ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ
ಬೆಂಗಳೂರು: ಅಗಾಧ ಪ್ರತಿಭೆಗಳು ಹಾಗೂ ರಾಜ್ಯದಲ್ಲಿರುವ ಮಾನವ ಸಂಪನ್ಮೂಲ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಆಕರ್ಷಣೀಯ ತಾಣವಾಗುವಂತೆ ಮಾಡಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆಯವರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಉದ್ಯೋಗ ಸೃಷ್ಟಿ, ಮೂಲಭೂತ ಸೌಕರ್ಯ ಕಲ್ಪಿಸುವುದು ಪ್ರತೀಯೊಂದು ರಾಜ್ಯದಲ್ಲಿ ಎದುರಾಗಿರುವ ದೊಡ್ಡ ಸವಾಲಾಗಿದೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಎನ್'ಡಿಎ ಸರ್ಕಾರ ಪ್ರತೀವರ್ಷ 2 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇಂದು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಯಾಂತ್ರೀಕೃತ, ಡಿಜಿಲೀಕರಣದಿಂದಾಗಿ ಈ ಸಮಸ್ಯೆಗಳು ಎದುರಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಎದುರಾಗಿರುವ ಸಮಸ್ಯೆಯನ್ನು ಹೇಗೆ ನಿಭಾಯಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸಮಸ್ಯೆಯನ್ನು ಪರಿಹರಿಸಬೇಕಾದರೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಕರ್ನಾಟಕ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಉತ್ತಮವಾದ ಶಿಕ್ಷಣದಿಂದ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ವಾಯುಯಾನದಂತಹ ಹೊಸ ಕೈಗಾರಿಕೆಗಳು ಬರುತ್ತಿರುವುದರಿಂದ ಇಂತಹ ಕೌಶಲ್ಯಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಮಾಹಿತಿ ತಂತ್ರಜ್ಞಾನದ ಕಡೆಗೆ ನೀಡಿದ ಪ್ರಾಮುಖ್ಯದಂತೆ ಈ ಕ್ಷೇತ್ರದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
1.47 ಲಕ್ಷ ಕೋಟಿ ಹೂಡಿಕೆದಾರರು ಈ ವರೆಗೂ ಕರ್ನಾಟಕದ ಕಡೆಗೆ ಆಕರ್ಷಿತರಾಗಿದ್ದಾರೆ. ಗುಜರಾತ್ ನಲ್ಲಿ 77,000 ಹೂಡಿಕೆದಾರರಿದ್ದಾರೆ. ರಾಜ್ಯದಲ್ಲಿರುವ ಪ್ರತಿಭೆ ಹಾಗೂ ಅಗಾಧವಾದ ಮಾನವ ಸಂಪನ್ಮೂಲವೇ ಹೂಡಿಕೆದಾರರು ಕರನಾಟಕದ ಕಡೆಗೆ ಹೆಚ್ಚು ಆಕರ್ಷಿತರಾಗಲು ಕಾರಣವಾಗಿದೆ. ರಾಜ್ಯದಲ್ಲಿ 500ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಪ್ರತಿಭೆ ಎಂಬುದು ಅತ್ಯಂತ ಪ್ರಮುಖವಾದ ವಿಚಾರವಾಗಿದೆ. ನಮ್ಮ ಕೈಗಾರಿಕಾ ನೀತಿಯಲ್ಲಿ 2019ರ ಮಾರ್ಚ್ ವೇಳೆಗೆ 15 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ನಾವು ನೀಡಬಲ್ಲೆವು. ಈ ಹಿಂದೆ ನಾವು ನೀಡಿದ್ದ ಭರವಸೆಯಂತೆ ಈಗಾಗಲೇ ನಾವು 14 ಲಕ್ಷ ಉದ್ಯೋಗವನ್ನು ಸೃಷ್ಟಿಸಿದ್ದೇವೆ. 5.09ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಇಡೀ ದೇಶದ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಕರ್ನಾಟಕ ರಾಜ್ಯದಲ್ಲಿ ಮಾತ್ರ ಧನಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ ಎಂದಿದ್ದಾರೆ.
ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಉತ್ತಮವಾದ ಪರಿಕಲ್ಪನೆಯಾಗಿದೆ. ಆದರೆ, ಕರ್ನಾಟಕ ಇದನ್ನು ಬಹಳ ಹಿಂದೆಯೇ ಆರಂಭ ಮಾಡಿತ್ತು. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮುಂದಾಳತ್ವ ವಹಿಸಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇದನ್ನು ನಾವು ಬೆಂಬಲಿಸುತ್ತೇವೆ. ಕರ್ನಾಟಕ ಬಹಳ ಮುಂದಾಲೋಚನೆಯುಳ್ಳ ರಾಜ್ಯವಾಗಿದೆ. ಉದಾಹರಣೆಗೆ ವಾಯುಯಾನ ನೀತಿಯನ್ನೇ ತೆಗೆದುಕೊಳ್ಳಬಹುದು. ಮೂಲಭೂತ ಸೌಕರ್ಯಗಳ ನೀತಿಯನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ, ಇದಲ್ಲದೆ, ಕೈಗಾರಿಕಾ ನೀತಿ, ಸಿಂಗಲ್ ವಿಂಡೋ, ಜಾಗತಿಕ ಬಂಡವಾಳ ಹೂಡಿಕೆ ಸಭೆ, ಸ್ಟಾರ್ಟ್ ಅಪ್ ನೀತಿ ಸೇರಿದಂತೆ ಹಲವಾರು ನೀತಿಗಳನ್ನು ಕರ್ನಾಟಕ ರೂಪಿಸಿದೆ. ಇದೀಗ ವಿದ್ಯುತ್ ವಾಹನಗಳ ನೀತಿಯನ್ನು ಕರ್ನಾಟಕ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos