ರಾಜ್ಯ

ಲಿಂಗಾಯತ ಧರ್ಮ ಅಧ್ಯಯನಕ್ಕೆ ಸಮಿತಿ ರಚಿಸಿದ ಸರ್ಕಾರ: 4 ವಾರದಲ್ಲಿ ವರದಿ ಸಲ್ಲಿಸಲು ಸೂಚನೆ

Manjula VN
ಬೆಂಗಳೂರು: ವಿಧಾನಸಬಾ ಚುನಾವಣೆ ವೇಳೆ ಭಾರೀ ರಾಜಕೀಯ ದಾಳವಾಗಿ ಬಳಕೆಯಾಗಲಿದೆ ಎಂದೇ ನಿರೀಕ್ಷಿಸಲಾಗಿರುವ ಲಿಂಗಾಯತ ಹಾಗೂ ವೀರಶೈವ ಧರ್ಮದ ಧರ್ಮದ ವಿವಾದವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ರಾಜ್ಯ ಸರ್ಕಾರ ಶುಕ್ರವಾರ ಉನ್ನತಮಟ್ಟದ ಸಮಿತಿಯೊಂದನ್ನು ರಚನೆ ಮಾಡಿದ್ದು, 4 ವಾರಗಳೊಳಗಾಗಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚನೆ ನೀಡಿದೆ. 
ಲಿಂಗಾಯತ ಹಾಗೂ ವೀರಶೈವ ಧರ್ಮದ ವಿಚಾರವಾಗಿ ಸಲ್ಲಿಕೆಯಾಗಿದ್ದ 5 ಮನವಿ ಪತ್ರಗಳ ಕುರಿತಂತೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಳೆದ ಸೋಮವಾರವಷ್ಟೇ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಶಿಫಾರಸು ಮಾಡಿತ್ತು. ಸರ್ಕಾರದ ಮನವಿ ಮೇರೆಗೆ ಆಯೋಗವು ನಿನ್ನೆ 7 ಮಂದಿ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿದೆ. 
ಸಮಿತಿಯು ಅಧ್ಯಯನ ನಡೆಸಿ, ವೀರಶೈವ ಅಥವಾ ಲಿಂಗಾಯತ, ವೀರಶೈವ-ಲಿಂಗಾಯತ ಹಾಗೂ ಲಿಂಗಾಯತ ಈ ಮೂರು ಶಬ್ದಗಳ ಬಗೆಗೆ ಇರುವ ಸಂಶಯಗಳಿಗೆ ಉತ್ತರವಾಗಿ ಆಯೋಗಕ್ಕೆ ಶಿಫಾರಸು ಮಾಡಲಿದೆ. ಈ ಶಿಫಾರಸನ್ನು ಆಯೋಗ ರಾಜ್ಯ ಸರ್ಕಾರಕ್ಕೆ ಕಳಿಸಲಿದ್ದು, ಮುಂದೆ ಸರ್ಕಾರ ವಿವಾದದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ. 
ಸರ್ಕಾರ ರಚನೆ ಮಾಡಿರುವ ಸಮಿತಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾ.ನಾಗಮೋಹನ್ ದಾಸ್ ಸಮಿತಿಯ ಅಧ್ಯಕ್ಷರಾಗಿದ್ದು, ಚಿಂತಕ ಪ್ರೊ.ಮುಜಾಫರ್ ಅಸಾದಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್, ಹಿರಿಯ ಪತ್ರಕರ್ತ ಸರಜೂಕಾಟ್ಕರ್, ವಿಮರ್ಶಕ ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಹಿರಿಯ ಸಾಹಿತಿ ರಾಮಕೃಷ್ಣ ಮರಾಠೆ ಸಮಿತಿಯ ಸದಸ್ಯರಾಗಿದ್ದಾರೆ. 
SCROLL FOR NEXT