ಕಲಾವಿದನ ಕಲ್ಪನೆಯಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಚಿನ್ನದ ಗೋಪುರ
ಮಂಗಳೂರು: ಹದಿನಾರು ವರ್ಷಗಳ ನಂತರ ನಡೆಯುವ ತಮ್ಮ ಎರಡನೇ ಪರ್ಯಾಯದ ಭಾಗವಾಗಿ ಪಾಲಿಮಾರು ಮಠದ ಶ್ರೀಗಳಾದ ವಿದ್ಯಾದೀಶತೀರ್ಥ ಸ್ವಾಮೀಜಿ, ದ್ವಾರಕಾ ದೇವಾಲಯದ ಸೌಂದರ್ಯ ಮತ್ತು ಸಮೃದ್ಧತೆಯ ಪ್ರತಿರೂಪವನ್ನು ಉಡುಪಿಯ ಶ್ರೀ ಕೃಷ್ಣ ಮಠದ ಗರ್ಭಗುಡಿಯ ಗೋಪುರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಈ ಚಿನ್ನದ ಗೋಪುರ ಸಿದ್ಧವಾಗಬಹುದು ಎಂದು ಅವರು ಆಶಿಸುತ್ತಾರೆ.
ಉಡುಪಿಯ ಅಷ್ಟಮಠಗಳ ಸ್ವಾಮೀಜಿಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ಒಬ್ಬರು ಕೃಷ್ಣ ದೇವರನ್ನು ಪೂಜಿಸುವ ಮತ್ತು ದೇವಸ್ಥಾನದ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಕ್ಕೆ ಪರ್ಯಾಯ ಎಂದು ಕರೆಯುತ್ತಾರೆ. ಕೃಷ್ಣ ದೇವರನ್ನು ಪೂಜಿಸುವ ಜವಾಬ್ದಾರಿ ಹೊತ್ತಿಕೊಂಡಿರುವ ಸ್ವಾಮೀಜಿಯನ್ನು ಪರ್ಯಾಯ ಸ್ವಾಮಿಗಳು ಎಂದು ಕರೆಯಲಾಗುತ್ತದೆ.
ಉಡುಪಿ ಶ್ರೀ ಕೃಷ್ಣ ದೇವಾಲಯದ ಗರ್ಭಗುಡಿಯ ಮೇಲಿರುವ ಈಗಿನ ಗೋಪುರ ತಾಮ್ರದ್ದಾಗಿದ್ದು ಅದನ್ನು ಬದಲಾಯಿಸಿ ಚಿನ್ನದ ಗೋಪುರ ನಿರ್ಮಿಸಲು ಸುಮಾರು 32 ಕೋಟಿ ರೂಪಾಯಿ ಬೆಲೆಯ 100 ಕೆಜಿ ಚಿನ್ನ ಬೇಕಾಗಬಹುದು. ಗೋಪುರದ ಪ್ರತಿ ಚದರಡಿಗೆ ಸುಮಾರು 40 ಗ್ರಾಮ್ ಚಿನ್ನದಂತೆ ಸುಮಾರು 2,500 ಚದರಡಿಗಳಿಗೆ 100 ಕೆಜಿ ಚಿನ್ನ ಬೇಕಾಗಬಹುದು ಎಂದು ವಿದ್ಯಾದೀಶತೀರ್ಥ ಸ್ವಾಮೀಜಿ ಹೇಳಿದ್ದು, ಭಕ್ತರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಭಕ್ತಾದಿಗಳು ನೀಡುವ ಅರ್ಧ ಗ್ರಾಂ ಚಿನ್ನವನ್ನು ಕೂಡ ಸ್ವೀಕರಿಸುತ್ತೇವೆ. ಒಂದು ಚದರಡಿ ಚಿನ್ನವನ್ನು ದಾನ ಮಾಡಿದ ಭಕ್ತರ ಹೆಸರನ್ನು ಚಿನ್ನದ ಬಾಗಿಲಿನ ಅಂಚಿನಲ್ಲಿ ಕೆತ್ತಲಾಗುವುದು.ಚಿನ್ನ ಮಾಡಿದ ಪ್ರತಿಯೊಬ್ಬರಿಗೂ ರಶೀದಿ ನೀಡುತ್ತೇವೆ. ಚಿನ್ನದ ಗೋಪುರಕ್ಕೆ ಹಣ ಸಂಗ್ರಹಿಸಲು ನೋಟುಗಳ ಅನಾಣ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿ ಅಡ್ಡಿಯುಂಟಾಗುತ್ತಿದೆ. ಈ ಯೋಜನೆಗೆ ದೇವರೇ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಶ್ರೀಗಳು ಹೇಳಿದರು.
ದೇವಾಲಯದ ಗರ್ಭಗುಡಿಗೆ ಚಿನ್ನದ ಗೋಪುರದ ಅಗತ್ಯತೆಯನ್ನು ತಿಳಿಸಿದ ಅವರು, ದೇವಾಲಯದ ಕಟ್ಟಡ, ಗೋಪುರ ಮತ್ತು ಗರ್ಭಗುಡಿಗಳು ದೇವರ ಶರೀರಕ್ಕೆ ಸಂಬಂಧ ಹೊಂದಿದ್ದು ದೇವರ ವಿಗ್ರಹವನ್ನು ಯಾವುದೇ ವಿಪತ್ತುಗಳಿಂದ ರಕ್ಷಿಸುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಿರುತ್ತದೆ. ಮರದಿಂದ ತಯಾರಿಸಿದ ಗೋಪುರ ಮಣ್ಣಿನ ಗೋಪುರಗಳಿಗಿಂತ ನಾಲ್ಕು ಪಟ್ಟು ಶ್ರೇಷ್ಠವಾಗಿರುತ್ತದೆ. ಇಟ್ಟಿಗೆಯ ಗೋಪುರ ಹತ್ತು ಪಟ್ಟು, ಕಲ್ಲಿನ ಗೋಪುರ 100 ಪಟ್ಟು, ತಾಮ್ರದ ಬೆಳ್ಳಿ ಗೋಪುರ ಸಾವಿರ ಪಟ್ಟು ಮತ್ತು ಚಿನ್ನದ ಗೋಪುರ ಲಕ್ಷ ಪಟ್ಟು ಹಿಂದಿನ ಗೋಪುರಗಳಿಗಿಂತ ಶ್ರೇಷ್ಠವಾಗಿರುತ್ತದೆ ಎಂದು ವಿವರಿಸಿದರು.
ಉಡುಪಿ ದೇವಸ್ಥಾನದ ಸಂಪ್ರದಾಯದಂತೆ ಶ್ರೀಗಳು ಚಿನ್ನದ ಗೋಪುರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಅವರ ಹಿಂದಿನ ಶ್ರೀಗಳಾದ ಶ್ಕೀ ವಿದ್ಯಮಾನ್ಯ ಶ್ರೀಪಾದರು ಚಿನ್ನದ ತೊಟ್ಟಿಲು, ಚಿನ್ನದ ರಥ ಮತ್ತು ವಜ್ರದ ಕಿರೀಟವನ್ನು ತಮ್ಮ ಎರಡು ಪರ್ಯಾಯಗಳ ಸಂದರ್ಭದಲ್ಲಿ ನೀಡಿದ್ದರು. ಕೃಷ್ಣ ದೇವರಿಗೆ ವಜ್ರದ ಆಯುಧ ನೀಡುವ ಅವರ ಬಯಕೆ ತಮ್ಮ ಶಿಷ್ಯನ ಪರ್ಯಾಯ ಸಂದರ್ಭದಲ್ಲಿ ಈಡೇರಿತ್ತು.
ಜನವರಿಯಲ್ಲಿ ಪರ್ಯಾಯ ನಡೆಯಲಿದೆ. ಕೃಷ್ಣ ದೇವರಿಗೆ ಒಂದು ಲಕ್ಷ ತುಳಸಿ ಎಲೆ ಸಮರ್ಪಣೆ ಮತ್ತು ಭಜನಾ ಮಂಡಳಿಗಳಿಂದ ಎರಡು ವರ್ಷಗಳ ಕಾಲ ನಿರಂತರವಾಗಿ ಶ್ರೀರಾಮ ನಾಮ ಪಠಣೆ ಈ ವರ್ಷದ ಪರ್ಯಾಯದ ಮುಖ್ಯ ಕಾರ್ಯಕ್ರಮಗಳಾಗಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos