ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರ ಕುಮಾರ್ ಕಠಾರಿಯಾ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಠಾರಿಯಾ ಆಡಳಿತ ಅವಧಿ ಕೆಎಸ್ ಆರ್ ಟಿಸಿಗೆ ಉತ್ತಮವಾಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಕೆಎಸ್ ಆರ್ ಟಿಸಿ ಅಧ್ಯಕ್ಷ ಕೆ, ಗೋಪಾಲ ಪೂಜಾರಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಠಾರಿಯಾ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬು ಸುದ್ದಿಗಳು ವಿಧಾನಸೌಧ ಸುತ್ತಮುತ್ತ ಹರಿದಾಡುತ್ತಿವೆ.
ಸಾರಿಗೆ ಸಚಿವರು ಹಾಗೂ ಕೆಎಸ್ ಆರ್ ಟಿಸಿ ಅಧ್ಯಕ್ಷರು ಕಠಾರಿಯಾ ಅವರನ್ನು ವರ್ಗಾವಣೆ ಮಾಡುವಂತೆ ಸಿಎಂ ಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಠಾರಿಯಾ ಅವರು ಹೊಸ ಬಸ್, ಟೈರ್ ಹಾಗೂ ಸ್ಪೇರ್ ಪಾರ್ಟ್ಸ್ ಖರೀದಿಯಲ್ಲಿ ಪಾರದರ್ಶಕತೆ ತರಲು ಮುಂದಾಗಿದ್ದು ರಾಜಕಾರಣಿಗಳಿಗೆ ಅಪಥ್ಯವಾಗಿತ್ತು ಹಾಗಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕೆಎಸ್ ಆರ್ ಟಿಸಿ ಮೂಲಗಳು ತಿಳಿಸಿವೆ.
ಕಠಾರಿಯಾ ಅವರು ಎರಡೂವರೆ ವರ್ಷ ಪೂರೈಸಿದ್ದರು, ಹೀಗಾಗಿ ವರ್ಗಾವಣೆಯಾಗಿದೆ, ಅದರಲ್ಲಿ ವಿಶೇಷ ಏನು ಇಲ್ಲ, ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಠಾರಿಯಾ ತಮ್ಮ ಕೆಲಸ ನಿರ್ವಹಿಸಿದ್ದಾರೆ,. ನಾನು ಸಿಎಂ ಗೆ ಯಾವುದೇ ಪತ್ರ ಬರೆದಿಲ್ಲ, ಎಂದು ನಿಗಮದ ಅಧ್ಯಕ್ಷ ಗೋಪಾಲ್ ಪೂಜಾರಿ ಸ್ಪಷ್ಟ ಪಡಿಸಿದ್ದಾರೆ.
ಕೆಎಸ್ ಆರ್ ಟಿಸಿ ಎಂಡಿಯಾಗಿ ನಾನು ನನ್ನ ಅವಧಿಯನ್ನು ಎಂಜಾಯ್ ಮಾಡಿದ್ದೇನೆ. ಜನಗಳಿಗೆ ಉತ್ತಮ ಸೇವೆ ಒದಗಿಸಲು ನನಗಿದ್ದ ಅವಕಾಶವನ್ನು ಬಳಸಿಕೊಂಡಿದ್ದೇನೆ ಎಂದು ಹೇಳಿದ ರಾಜೇಂದ್ರ ಕುಮಾರ್ ಕಠಾರಿಯಾ, ಸಚಿವರು ಮತ್ತು ಅಧ್ಯಕ್ಷರ ಜೊತೆಗಿನ ಒಳಜಗಳದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ರಾಜೇಂದ್ರ ಕುಮಾರ್ ಕಠಾರಿಯಾ 2014 ರಲ್ಲಿ ಕೆಎಸ್ ಆರ್ಟಿ ಸಿ ಎಂಡಿಯಾಗಿ ಅಧಿಕಾರ ಸ್ವೀಕರಿಸಿದರು, ಅವರ ಅಧಿಕಾರವಧಿಯಲ್ಲಿ ಹಲವು ಜನಪಯೋಗಿ ಕೆಲಸಗಳನ್ನು ನೆರವೇರಿಸಿದ್ದಾರೆ. ದೇಶದಲ್ಲೇ ಮೊದಲಬಾರಿಗೆ ಕೆಎಸ್ ಆರ್ ಟಿಸಿಯಲ್ಲಿ ಮೊಬೈಲ್ ಆ್ಯಪ್ ಸೇವೆ ಜಾರಿಗೆ ತಂದರು.
125 ಪ್ರಶಸ್ತಿಗಳನ್ನು ಪಡೆದ ಕೆಎಸ್ ಆರ್ ಟಿಸಿ ಇವರ ಅವಧಿಯಲ್ಲಿ ಲಿಮ್ಕಾ ದಾಖಲೆ ಸೇರಿತು. ಬಯೋ ಡಿಸೇಲ್ ಬಸ್, ಸ್ವಯಂ ಚಾಲಿತ ಇಂಧನ ಪೂರೈಕೆ ಸ್ಟೇಷನ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಜಾರಿಗೆ ತಂದ ಕೀರ್ತಿ ಕಠಾರಿಯಾ ಅವರದ್ದು.
2015-16 ರಲ್ಲಿ ಕೆಎಸ್ ಆರ್ ಟಿಸಿ 115 ಕೋಟಿ ರು ಲಾಭ ಪಡೆದಿತ್ತು. ಕೆಎಎಸ್ ಆರ್ ಟಿಸಿ ನೌಕರರ ಮುಷ್ಕರ ಕಾವೇರಿ ಗಲಾಟೆ ಸೇರಿದಂತೆ ಹಲವು ಸವಾಲಗಳನ್ನು ಕಠಾರಿಯಾ ಸ್ವೀಕರಿಸಿದ್ದರು ಎಂದು ಮತ್ತೊಬ್ಬ ಕೆಎಸ್ ಆರ್ ಟಿಸಿ ಅಧಿಕಾರಿ ತಿಳಿಸಿದ್ದಾರೆ.
ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ,ಆರ್ ಉಮಾಶಂಕರ್ ಕೆಎಸ್ ಆರ್ ಟಿಸಿ ಎಂಡಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.