ಬೆಳಗಾವಿ: : ಜಿಲ್ಲೆಯ ಶಾಸಕರು ಹಾಗೂ ಸಂಸದರ ನಿರ್ಲಕ್ಷ್ಯದಿಂದಾಗಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನ ಎಂಇಎಸ್ ಪಾಲಾಗಿದ್ದು, ಮೇಯರ್ ಆಗಿ ಸಂಜೋತಾ ಬಾಂಧೇಕರ ಹಾಗೂ ಉಪ ಮೇಯರ್ ಆಗಿ ನಾಗೇಶ ಮಂಡೋಳ್ಕರ ಅವರು ಬುಧವಾರ ಆಯ್ಕೆಯಾಗಿದ್ದಾರೆ.
ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಎಂಇಎಸ್ ಒಗ್ಗಟ್ಟು ಪ್ರದರ್ಶಿಸಿದ್ದರೆ, ಕನ್ನಡಿಗರು ಒಗ್ಗಟ್ಟು ಪ್ರದರ್ಶಿಸದ ಹಿನ್ನೆಲೆಯಲ್ಲಿ ಮತ್ತೆ ಕನ್ನಡಿಗರಿಗೆ ಮುಖಭಂಗವಾಗಿದೆ.
ಮೇಯರ್ ಚುನಾವಣೆಯಲ್ಲಿ ಎಂಇಎಸ್ ನಿಂದ ಸಂಜೋತಾ ಅವರು ಕಣಕ್ಕಿಳಿದ್ದರು. ಆದರೆ ಬಣ ರಾಜಕೀಯದಿಂದಾಗಿ ಇಬ್ಬರು ಕನ್ನಡಿಗ ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದರಿಂದ ಮೇಯರ್, ಉಪಮೇಯರ್ ಹುದ್ದೆ ಕನ್ನಡಿಗರ ಕೈತಪ್ಪಿದಂತಾಗಿದೆ.
ಮೇಯರ್ ಸ್ಥಾನಕ್ಕೆ ಸಚಿವ ರಮೇಶ್ ಜಾರಕಿಹೊಳಿ ಬಣದಿಂದ ಜಯಶ್ರೀ ಪುಷ್ಪಾ ಹಾಗೂ ಶಾಸಕ ಫಿರೋಜ್ ಸೇಠ್ ಬಣದಿಂದ ಪುಷ್ಪಾ ಪರ್ವತಾರಾವ್ ಅವರು ಸ್ಪರ್ಧಿಸಿದ್ದರು. ಅಲ್ಲದೆ ಮತದಾನದ ಸಂದರ್ಭದಲ್ಲಿ ಕನ್ನಡಿಗ ಸಂಸದರಾದ ಪ್ರಕಾಶ್ ಹುಕ್ಕೇರಿ, ಸುರೇಶ್ ಅಂಗಡಿ ಹಾಗೂ ಸಂಜಯ ಪಾಟೀಲ್ ಮತದಾನದಿಂದ ದೂರ ಉಳಿದಿದ್ದರು. ಈ ಮೂವರು ಮತ ಹಾಕಿದ್ದರೆ ಕನ್ನಡಿಗ ಅಭ್ಯರ್ಥಿಯ ಗೆಲುವು ಸಾಧ್ಯವಿತ್ತು ಎನ್ನಲಾಗಿದೆ.
ಬಣ ರಾಜಕೀಯ ತಿಕ್ಕಾಟದಿಂದಾಗಿ ಎಂಇಎಸ್ ನ ಸಂಜೋತಾ ಬಾಂದೇಕರ್ 32 ಮತ ಪಡೆದು ಗೆಲುವಿನ ನಗು ಬೀರಿದ್ದರೆ, ಕನ್ನಡಿಗ ಅಭ್ಯರ್ಥಿಯಾದ ಜಯಶ್ರೀ ಮಾಳಗಿ 17 ಮತ ಪಡೆದಿದ್ದು, ಪುಷ್ಪಾ 10 ಮತ ಗಳಿಸಿದ್ದಾರೆ.