ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಸೇರಿದಂತೆ 8 ಆರೋಪಿಗಳಿಗೆ ಬೆಳಗಾವಿ ಸೆಷನ್ಸ್ ಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ.
ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆ, ಸಹೋದರ ಸಿದ್ದಗೌಡ ಕಾಗೆ, ಪುತ್ರಿ ತೃಪ್ತಿ ಕಾಗೆ, ಶೋಭಾ ಕಾಗೆ ಸೇರಿದಂತೆ ಚಾಲಕ ಬಾಹುಬಲಿಗೆ ಷರತ್ತು ಬದ್ಧ ಜಾಮೀನು ನೀಡಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ಹಲ್ಲೆ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಶಾಸಕ ಕಾಗೆ ಹಾಗೂ ಅವರ ಕುಟುಂಬ ಸದಸ್ಯರನ್ನು ಪೊಲೀಸರು ಜನವರಿ 19ರಂದು ಬಂಧಿಸಿದ್ದರು. ಬಳಿಕ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಫೇಸ್ ಬುಕ್'ನಲ್ಲಿ ಕಾಂಗ್ರೆಸ್ ನಾಯಕ ವಿವೇಕ್ ಶೆಟ್ಟಿ ಬಿಜೆಪಿ ವಿರುದ್ಧ ಅವಹೇಳನಕಾರಿ ಸ್ಟೇಟಸ್ ಹಾಕಿದ್ದರು ಎಂದು ಆರೋಪಿಸಿ ರಾಜು ಕಾಗೆ ಸಹೋದರ ಪ್ರಸಾದ್ ಸಿದ್ದಗೌಡಕಾಗೆ ಹಾಗೂ 12 ಜನ ಅಥಣಿ ತಾಲೂಕಿನ ಉಗಾರ ಗ್ರಾಮದ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಜನವರಿ 1ರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆಯ ಮೆಟ್ಟಿಲುಗಳ ಮೇಲೆ ಧರಧರನೆ ಎಳೆದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿವೇಕ್ ಶೆಟ್ಟಿ ದೂರಿನ ಮೇರೆಗೆ ರಾಜುಕಾಗೆ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ಗೂಂಡಾಗಿರಿ ಕೇಸ್ ದಾಖಲಿಸಿಕೊಂಡಿದ್ದರು.