ತುಮಕೂರು: ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ಸಿಗದಿರುವುದರಿಂದ ಬೇಸತ್ತ ಗರ್ಭಿಣಿ ಮಹಿಳೆಯರು ರಾಜ್ಯ ಹೆದ್ದಾರಿಯಲ್ಲಿ ನಿಂತು ವಾಹನ ಚಾಲಕರಿಗೆ ತೊಂದರೆಯುಂಟುಮಾಡಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಚಳ್ಳಕೆರೆಯಲ್ಲಿ ನಡೆದಿದೆ.
ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದರಿಂದ ಪೊಲೀಸರ ಮಧ್ಯ ಪ್ರವೇಶದಿಂದ ಸ್ಥಳಕ್ಕೆ ಧಾವಿಸಿದ ಸ್ತ್ರೀ ರೋಗ ತಜ್ಞ ಕೆ.ಜಿ.ಜಗದೀಶ್ ಮಹಿಳೆಯರನ್ನು ಪರೀಕ್ಷಿಸಿ ಕಳುಹಿಸಿದರು.
ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿರುವ ಸ್ತ್ರೀ ರೋಗ ತಜ್ಞ ಡಾ. ಜಗದೀಶ್ 5 ದಿನ ರಜೆ ಹಾಕಿದ್ದರು. ನಿನ್ನೆ ಆಸ್ಪತ್ರೆಗೆ ರೋಗಿಗಳು ಹೋದಾಗ ವೈದ್ಯರು ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರು ಬರಬೇಕೆಂದು ಪ್ರತಿಭಟನೆ ನಡೆಸಿದರು. ಆದರೂ ಬಾರದಿದ್ದಾಗ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು. ಪೊಲೀಸರು ಅವರ ಮನವೊಲಿಸಲು ಪ್ರಯತ್ನಿಸಿದಾಗ ಕೇಳದೆ ಪ್ರತಿಭಟನೆ ಮುಂದುವರಿಸಿದರು.
ಬಿಪಿಎಲ್ ಕಾರ್ಡು ಹೊಂದಿರುವ ಸುತ್ತಮುತ್ತಲ ಗ್ರಾಮದ ಮಹಿಳೆಯರು ಇಲ್ಲಿಗೆ ಚಿಕಿತ್ಸೆಗೆ ಹೋಗುತ್ತಾರೆ. ಸರ್ಕಾರ ಈ ಆಸ್ಪತ್ರೆಗೆ ಪುರುಷ ಸ್ತ್ರೀ ರೋಗ ತಜ್ಞರನ್ನು ನೇಮಿಸಬೇಕು. ನಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಪುರುಷ ವೈದ್ಯರಲ್ಲಿ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಗಂಗಸಾಗರ ಗ್ರಾಮದ ಪದ್ಮರಾಣಿ.
ತಾವು ಭಾನುವಾರ ರಾತ್ರಿ ಕೆಲಸಕ್ಕೆ ಹಾಜರಾಗಿ ಸೋಮವಾರ ವಿಶ್ರಾಂತಿ ತೆಗೆದುಕೊಳ್ಳಲು ಮನೆಗೆ ಹೋಗಿದ್ದೆ. ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳು ಹೆರಿಗೆ ಕೇಸುಗಳನ್ನು ಪಾವಗಡ ಆಸ್ಪತ್ರೆಗೆ ಕಳುಹಿಸುತ್ತಿದ್ದು ನನಗೆ ವಿಪರೀತ ಹೊರೆಯಾಗಿದೆ. ರಾಜಕೀಯ ವ್ಯಕ್ತಿಗಳ ಪ್ರತಿಕೂಲ ನಡೆಯಿಂದಾಗಿ 4 ತಿಂಗಳ ಹಿಂದೆ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದೆ ಎನ್ನುತ್ತಾರೆ ಸ್ತ್ರೀ ರೋಗ ತಜ್ಞ ಡಾ.ಜಗದೀಶ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos