ಪೇಜಾವರ ಶ್ರೀಗಳು ಆಯೋಜಿಸಿದ್ದ ಇಫ್ತಾರ್ ಕೂಟ (ಸಂಗ್ರಹ ಚಿತ್ರ)
ಮಂಗಳೂರು: ಜೂನ್ 24 ರಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿ ನಮಾಜ್ ಮಾಡಲು ಅವಕಾಶ ನೀಡಿದ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಡೆ ಖಂಡಿಸಿ ಶ್ರೀರಾಮ ಸೇನೆ ಮತ್ತು ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಲಾಲ್ ಬಾಗ್ ನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಹಿಂದೂ ಮಹಸಭಾ ರಾಜ್ಯ ಸಂಚಾಲಕ ಧರ್ಮೇಂದ್ರ, ರಾಜ್ಯ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ನಡೆದ ಪಿತೂರಿ ಇದಾಗಿದೆ ಎಂದು ದೂರಿದ್ದಾರೆ.
ಸ್ವಾಮೀಜಿ ಅವರ ನಡವಳಿಕೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ ಅವರು, ನಮಗೆ ಮಠದ ಜೊತೆ ಭಾವನಾತ್ಮಕ ಸಂಬಂಧವಿದೆ, ಹೀಗಾಗಿ ಮಠದ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದ್ದಾರೆ.
ಮಠದ ಆವರಣದೊಳಗೆ ಇಪ್ತಾರ್ ಕೂಟ ಆಯೋಜಿಸಿದ್ದಕ್ಕೆ ಪೇಜಾವರ ಶ್ರೀಗಳು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.
ಮಠದಿಂದ ಹೊರಗೆ ಬೇರೆ ಸ್ಥಳದಲ್ಲಿ ಇಫ್ತಾರ್ ಕೂಟ ಆಯೋಜಿಸಲು ಮತ್ತು ಅಲ್ಲಿ ನಮಾಜ್ಗೆ ಅವಕಾಶ ನೀಡಲು ನಮ್ಮ ವಿರೋಧ ಇಲ್ಲ. ಮಠದ ಹೊರಗೆ ಇಫ್ತಾರ್ ಆಯೋಜಿಸಿ ಆಹ್ವಾನಿಸಿದ್ದರೆ ನಾವು ಪಾಲ್ಗೊಳ್ಳುತ್ತಿದ್ದೆವು ಎಂದು ಹೇಳಿದರು.
ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮಠದ ಸುತ್ತಲೂ ಸರ್ಪಗಾವಲು ಹಾಕಲಾಗಿತ್ತು. ಅರ್ಧ ಗಂಟೆ ಪ್ರತಿಭಟನೆ ನಡೆಸಲು ಮಾತ್ರ ಅವಕಾಶ ನೀಡಲಾಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos