ಬೆಂಗಳೂರು: ಉಡುಪಿ ಶ್ರೀ ಕೃಷ್ಣಮಠದ ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳು ಮುಸ್ಲಿಂರಿಗಾಗಿ ಇಫ್ತಾರ್ ಕೂಟ ಆಯೋಜಿಸಿದ್ದಕ್ಕೆ ಶ್ರೀರಾಮಸೇನೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ ಈ ಸಂಬಂಧ ಜುಲೈ 2ರಂದು ಮೌರ್ಯ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಯಾವುದೇ ದೇವಸ್ಥಾನದಲ್ಲಿ ಇನ್ನುಂದೆ ಇಫ್ತಾರ್ ಮತ್ತು ನವಾಜ್ ಗೆ ಅವಕಾಶ ಮಾಡಿಕೊಟ್ಟರೆ ನಾನು ಹಾಗೂ ನನ್ನು ಬೆಂಬಲಿಗರು ರಕ್ತ ಹರಿಸುತ್ತೇವೆ ಎಂದು ಹೇಳಿದ್ದರು.
ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಮೋದ್ ಮುತಾಲಿಕ್ ವಿರುದ್ಧ ಪ್ರಕರಣ ದಾಖಲಾಗಿದ್ದು ಐಪಿಸಿ ಸೆಕ್ಷನ್ 153(ಎ), 295(ಎ) ಮತ್ತು 506 ಅಡಿಯಲ್ಲಿ ದೂರು ದಾಖಲಾಗಿದೆ.