ಬೆಂಗಳೂರು: ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕಂಬಳ ಕುರಿತಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವ ಬೆನ್ನಲ್ಲೇ ಇದರ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ ಮೆಂಟ್ ಆಫ್ ಎನಿಮಲ್ಸ್) ಹೇಳಿದೆ.
ಕಂಬಳವನ್ನು ರಾಜ್ಯ ಸರ್ಕಾರ ನ್ಯಾಯಬದ್ಧಗೊಳಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೆಟಾ (ಪ್ರಾಣಿ ದಯಾ ಸಂಘ), ಕಂಬಳ ಕ್ರೀಡೆ ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಆಶಯಗಳಿಗೆ ವಿರುದ್ಧವಾಗಿದೆ. ಅಷ್ಟೇ ಅಲ್ಲದೆ, ಸಂವಿಧಾನದಹ ಹಲವು ಕಲಂಗಳಿಗೂ ವಿರುದ್ಧವಾಗಿದೆ ಎಂದು ಹೇಳಿದೆ.
ಕೋಣಗಳಿಗೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡದ ಹೊರತು ಅವುಗಳು ಓಡಲಾರವು ಎಂಬುದಾಗಿ ಪ್ರಾಣಿ ಕಲ್ಯಾಣ ಮಂಡಳಿ ನಡೆಸಿದ ಶೋಧನೆಯಲ್ಲಿ ಸಾಬೀತುಗೊಂಡಿದೆ. ಮಂಡಳಿ ಸಿದ್ಧಪಡಿಸಿರುವ ವರದಿಯಲ್ಲಿ ಕಂಬಳದ ಕೋಣಗಳಿಗೆ ಹಿಂಸೆಯ ವಿವಿಧ ಸ್ವರೂಪಗಳ ಛಾಯಾಚಿತ್ರಗಳಿವೆ. ಕೋಣಗಳು ರೋಸ್ ಗಳಿಗೆ ಯೋಗ್ಯವಲ್ಲ ಎಂಬುದು ದೃಢಪಟ್ಟಿದ್ದು ಈ ವಾದವನ್ನು ಸುಪ್ರೀಂಕೋರ್ಟ್ ಕೂಡ 2014 ಆದೇಶದಲ್ಲಿ ಮಾನ್ಯ ಮಾಡಿದೆ ಎಂದು ಪೆಟಾ ತಿಳಿಸಿದೆ.
ಪ್ರಾಣಿ ಹಿಂಸೆಯ ಕಾರಣ ನೀಡಿ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಇದೇ ಮಾನದಂಡವನ್ನು ಅನ್ವಯಿಸಿ ರಾಜ್ಯದ ಕಂಬಳ ಕ್ರೀಡೆಗೂ ನಿಷೇಧದ ಬಿಸಿ ತಟ್ಟಿತ್ತು.
ಬಳಿಕ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಕ್ರೀಡೆಗೆ ಮಾನ್ಯತೆ ನೀಡಲು ಕಾನೂನು ಮೊರೆ ಹೋಗಿತ್ತು. ಅದೇ ರೀತಿ ಕರ್ನಾಟಕ ಕೂಡ ಜನರ ಹೋರಾಟಕ್ಕೆ ಮಣಿದು ಕಂಬಳಕ್ಕೆ ಅವಕಾಶ ನೀಡುವ ಕಾಯ್ದೆಗೆ ತಿದ್ದುಪಡಿ ತರಲು ಜ.28ಕ್ಕೆ ಒಪ್ಪಿಗೆ ನೀಡಿತ್ತು. ಬಳಿಕ ಫೆಬ್ರವರಿ. 13ಕ್ಕೆ ಕರ್ನಾಟಕ ವಿಧಾನಮಂಡಲ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ನೀಡಿ, ರಾಜ್ಯಪಾಲಕ ಅಂತಿಕಕ್ಕೆ ಕಳುಹಿಸಿತ್ತು. ಆದರೆ, ರಾಜ್ಯಪಾಲರು ಕಾಯ್ದೆಗೆ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿಕೊಟ್ಟಿದ್ದರು.
ರಾಷ್ಟ್ರಪತಿಗಳು ಈ ವಿಧೇಯಕದಲ್ಲಿನ ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ಬಯಸಿ ವಾಪಸ್ಸು ಕಳಿಸಿದ್ದರು. ಹೀಗಾಗಿ ಮೇ.5 ರಂದು ನಡೆದ ಸಚಿವ ಸಂಪುಟದಲ್ಲಿ ರಾಷ್ಟ್ರಪತಿಗಳು ಅಕ್ಷೇಪ ಎತ್ತಿದ ಅಂಶಗಳನ್ನು ತಿದ್ದುಪಡಿ ಮಾಡಿ, ಸುಗ್ರೀವಾಜ್ಞೆ ರೂಪದಲ್ಲಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು. ಈ ಸುಗ್ರೀವಾಜ್ಞೆಗೆ ಕೆಲ ದಿನಗಳ ಹಿಂದಷ್ಟೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಹಸಿರು ನಿಶಾನೆ ತೋರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos