ಬೆಂಗಳೂರು: ಕುಟುಂಬದಿಂದ ತಪ್ಪಿಸಿಕೊಂಡಿದ್ದ 3 ಬುದ್ಧಿಮಾಂದ್ಯ ಮಕ್ಕಳು ಮತ್ತೆ ತಮ್ಮ ಪೋಷಕರನ್ನು ಸೇರಲು ಆಧಾರ್ ನೆರವಾಗಿದೆ.
ಬೆಂಗಳೂರಿನಲ್ಲಿರುವ ಯುಐಡಿಎಐ ಪ್ರಾದೇಶಿಕ ಕಚೇರಿ ಅನಾಥಾಶ್ರಮಗಳಲ್ಲಿ ಆಧಾರ್ ನೋಂದಣಿ ಅಭಿಯಾನ ಪ್ರಾರಂಭಿಸಿತ್ತು. ಹೊಸೂರಿನಲ್ಲಿರುವ ಅನಾಥಾಶ್ರಮದಲ್ಲಿರುವ ಮಕ್ಕಳ ಹಿನ್ನೆಲೆಯನ್ನು ತಿಳಿದುಕೊಳ್ಳಲು ಮುಂದಾದಾಗ 3 ಬುದ್ಧಿಮಾಂದ್ಯ ಮಕ್ಕಳು ಈಗಾಗಲೇ ಆಧಾರ್ ಗೆ ನೋಂದಣಿಯಾಗಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ. ಆಧಾರ್ ನಲ್ಲಿ ನೋಂದಣಿಯಾಗಿದ್ದ ಮೂವರು ಮಕ್ಕಳ ಪೋಷಕರ ವಿಳಾಸವನ್ನು ಪತ್ತೆ ಹಚ್ಚಿ, ಕುಟುಂಬದಿಂದ ಬೇರ್ಪಟ್ಟಿದ್ದ ಬುದ್ಧಿಮಾಂದ್ಯ ಮಕ್ಕಳನ್ನು ಪೋಷಕರೊಂದಿಗೆ ಸೇರಿಸಲಾಗಿದೆ.
ನರೇಂದ್ರ ಎಂಬ ಬಾಲಕನನ್ನು 2016 ರ ಮೇ 21 ರಂದು ಅನಾಥಾಶ್ರಮಕ್ಕೆ ಕರೆತರಲಾಗಿತ್ತು. ಯುಐಡಿಎಐ ನೋಂದಣಿ ಅಭಿಯಾನದಲ್ಲಿ ಆತನ ಗುರುತು ಮಧ್ಯಪ್ರದೇಶದ ಇಂದೋರ್ ನಲ್ಲಿ ನೋಂದಣಿಯಾಗಿರುವುದು ತಿಳಿದುಬಂದಿದ್ದು, ಪೋಷಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಇನ್ನು ಓಂ ಪ್ರಕಾಶ್ ಎಂಬ ಬಾಲಕ ಸಹ ಮನೆಯಿಂದ ತಪ್ಪಿಸಿಕೊಂಡಿದ್ದು, ಆತನನ್ನೂ 21, 2016 ರಂದು ಅನಾಥಾಶ್ರಮಕ್ಕೆ ಕರೆತರಲಾಗಿತ್ತು. ಆತನ ಬಯೋಮೆಟ್ರಿಕ್ ಜಾರ್ಖಂಡ್ ನಲ್ಲಿದ್ದ ಪೋಷಕರಿಗೆ ಹೊಂದಾಣಿಕೆಯಾಗುತ್ತಿತ್ತು. ಅಂತೆಯೇ ನೀಲಕಂಠ ಎಂಬ ಬಾಲಕನ ವಿಳಾಸ ಆಂಧ್ರಪ್ರದೇಶದ ಚಿತ್ತೂರಿನಲ್ಲಿತ್ತು, ಆತನನ್ನು 2014, ಫೆ.24 ರಂದು ಸಿಸಿಐ ಗೆ ಕರೆತರಲಾಗಿತ್ತು.