ರಾಜ್ಯ

ಜೈಲಲ್ಲಿ ವಿಐಪಿ ಟ್ರೀಟ್'ಮೆಂಟ್: ಡಿಐಜಿ ವರ್ಗಾವಣೆ ಕುರಿತು ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ

Manjula VN
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಾಹರಗಳ ಬಗ್ಗೆ ವರದಿ ಸಲ್ಲಿಸಿದ್ದ ಬಂಧಿಖಾನೆ ಡಿಐಜಿ ಡಿ.ರೂಪಾ ಮತ್ತು ಡಿಜಿಪಿ ಸತ್ಯನಾರಾಯಣರಾವ್ ಅವರನ್ನು ವರ್ಗಾವಣೆಗೊಳಿಸಿರುವ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ. 
ಡಿಐಜಿ ವರ್ಗಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ನನಗೆ ಗೊತ್ತಿತ್ತು. ಸರ್ಕಾರ ಭ್ರಷ್ಟಾಚಾರ ಮಾಡುವ ಜನರಿಗೆ ಮತ್ತು ಭ್ರಷ್ಟ ಕೆಲಸ ಮಾಡುವವರಿಗೆ ರಕ್ಷಣೆ ನೀಡುವುದರತ್ತ ಒಲವು ತೋರುತ್ತದೆ. ಅಕ್ರಮ ಚಟುವಟಿಕೆಗಳಿಗೆ ಹಾಗೂ ಅಕ್ರಮಗಳನ್ನು ನಡೆಸುವ ಜನರಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಹೇಳಿದ್ದಾರೆ. 
ಪ್ರಕರಣ ಸಂಬಂಧ ಸತ್ಯಾಂಶಗಳನ್ನು ತರುವುದರತ್ತ ಸರ್ಕಾರ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಿಲ್ಲ. ಅಕ್ರಮ ಕೆಲಸ ಮಾಡುವ ಜನರಿಗೆ ಹಾಗೂ ಅಕ್ರಮ ಕೆಲಸಗಳಿಗೆ ಪ್ರೋತ್ಸಾಹ ನೀಡುವುದರತ್ತ ಹೆಚ್ಚು ಗಮನಹರಿಸುತ್ತಿದೆ  ಎಂದು ತಿಳಿಸಿದ್ದಾರೆ. 
ಕಾರಾಗೃಹದ ಇಬ್ಬರು ಹಿರಿಯ ಅಧಿಕಾರಿಗಳು ಇತ್ತೀಚೆಗೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರು. ಇದರಂತೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಂಡಿರುವ ರಾಜ್ಯ ಸರ್ಕಾರ ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ಡಿಐಜಿಯಾಗಿ ವರ್ಗಾವಣೆ ಮಾಡಿದೆ. ಸತ್ಯನಾರಾಯಣ ರಾವ್ ಅವರಿಗೆ ಯಾವುದೇ ಸ್ಥಾನವನ್ನು ನೀಡದೆ ಕಾರಾಗೃಹ ಡಿಜಿ ಸ್ಥಾನದಿಂದ ತೆರವುಗೊಳಿಸಿದೆ. ಸತ್ಯನಾರಾಯಣ ಅವರ ನಿವೃತ್ತಿಗೆ ಇನ್ನು ಕೆವೇ ದಿನಗಳು ಬಾಕಿಯಿರುವಾಗಲೇ ತಾತ್ಕಾಲಿಕವಾಗಿ ಸೇವೆಯಿಂದ ಮುಕ್ತಿಗೊಳಿಸಲಾಗಿದೆ. ಮುಖ್ಯಮಂತ್ರಿ ಸ್ಥಾನದೊಂದಿಗೆ ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. 
SCROLL FOR NEXT