ರಾಜ್ಯ

ಮಾಜಿ ಸಿಎಂ ಧರಂ ಸಿಂಗ್ ಪಂಚಭೂತಗಳಲ್ಲಿ ಲೀನ

Lingaraj Badiger
ಜೇವರ್ಗಿ: ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ರಾಜ್ಯ ರಾಜಕಾರಣದಲ್ಲಿ ಅಜಾತ ಶತ್ರು ಎಂದು ಕರೆಯಿಸಿಕೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ಶುಕ್ರವಾರ ಪಂಚಭೂತಗಳಲ್ಲಿ ಲೀನವಾದರು. 
ಧರಂ ಸಿಂಗ್ ಅವರ ಹುಟ್ಟೂರು ನೆಲೋಗಿಯ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯ ಸಂಸ್ಕಾರ ನಡೆಯಿತು. ಅವರ ಹಿರಿಯ ಪುತ್ರ ವಿಜಯ್ ಸಿಂಗ್ ಅವರು ರಜಪೂತ ಸಂಪ್ರದಾಯದಂತೆ ಅಂತಿಮ ಕಾರ್ಯ ನೆರವೇರಿಸಿದರು. ನರಸಿಂಹ ಶಾಸ್ತ್ರಿ, ವಿಶ್ವಶರ್ಮ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಬಳಿಕ ವಿಜಯ್ ಸಿಂಗ್ ಅವರು ಗಂಧದ ಕಟ್ಟಿಗೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಅಗ್ನಿಸ್ಪರ್ಶಕ್ಕೂ ಮೊದಲು ಮುಕ್ತಿ ಹವನ ನೆರವೇರಿಸಲಾಯಿತು. ಗಂಧದ ಕಟ್ಟಿಗೆಯ ಚಿತೆಗೆ ವಿಜಯ್ ಅವರು ಗಡಿಗೆ ನೀರು ತುಂಬಿಕೊಂಡು ಮೂರು ಸುತ್ತು ಸುತ್ತಿ, ಬಳಿಕ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. 
ಅಜಾತಶತ್ರುವಿನ ಅಂತಿಮ ದರ್ಶನಕ್ಕಾಗಿ ನೆಲೋಗಿಗೆ ಜನಸಾಗರವೇ ಹರಿದು ಬಂದಿತ್ತು. ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿತ್ತು. ತಮ್ಮ ನೆಚ್ಚಿನ ನಾಯಕನನ್ನು ನೆನೆದು ಕಣ್ಣೀರು ಹಾಕಿದರು.
ಮಾಜಿ ಮುಖ್ಯಮಂತ್ರಿಯ ಅಂತ್ಯ ಸಂಸ್ಕಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ದಿಗ್ವಿಜಯ್ ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
SCROLL FOR NEXT