ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೂನ್ 12 ರಿಂದ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರು ಮುಷ್ಕರ ಆರಂಭಿಸಲಿದ್ದಾರೆ.
ಬೆಂಗಳೂರು, ಮೈಸೂರು ಸೇರಿ12 ಮಹಾನಗರಗಳ 260 ಮುನಿಸಿಪಾಲಿಟಿಯ ಸುಮಾರು 40ಸಾವಿರ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೋಳ್ಳಲಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಜನಪರ ಯೋಜನೆಗಳನ್ನು ಕೈಗೊಂಡಿದೆ. ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ರ ಪೈಕಿ 115 ಭರವಸೆಗಳನ್ನು ಈಡೇರಿಸಿರುವುದಾಗಿ ಘೋಷಿಸಿದೆ, ಆದರೆ 2013-14 ನೇ ಸಾಲಿನ ಬಜೆಟ್ ವೇಳೆ ಘೋಷಿಸಿದ್ದ ಗುತ್ತಿಗೆ ಪೌರ ಕಾರ್ಮಿಕರ ನೌಕರಿಯನ್ನು ಕ್ರಮಬದ್ಧಗೊಳಿಸುವುದಾಗಿ ನೀಡಿದ್ದ ಭರವಸೆ ಮಾತ್ರ ಇನ್ನೂ ನೆರವೇರಿಲ್ಲ,
ಪೌರ ಕಾರ್ಮಿಕರ ಸೇವೆಯನ್ನು ಖಾಯಂ ಗೊಳಿಸುವ ಸಂಬಂಧ ಕಳೆದ ವರ್ಷ ಮೇ 4ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಜೊತೆಗೆ ವೇತನವನ್ನು 7 ಸಾವಿರದಿಂದ 14 ಸಾವಿರಕ್ಕೆ ಏರಿಸಲಾಗಿದೆ, ಬೆಳಗ್ಗಿನ ಉಪಹಾರ ಕೊಡುವ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿತ್ತು. ಆದರೆ ಸರ್ಕಾರದ ಈ ನಿರ್ಧಾರ ಅನುಷ್ಠಾನ ಗೊಂಡಿಲ್ಲ.
ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿದರೇ ಬೇರೆ ಇಲಾಖೆಗಳ ಗುತ್ತಿಗೆ ಕಾರ್ಮಿಕರು ಹಾಗೂ ನೌಕರರು ಕೂಡ ಇದನ್ನೇ ಬಯಸುತ್ತಾರೆ ಎಂಬ ಭಯದಿಂದಾಗಿ ಸಂಪುಟ ನಿರ್ಣಯವನ್ನು ಅನಷ್ಠಾನಗೊಳಿಸಿಲ್ಲ ಎನ್ನಲಾಗಿದೆ.
ಪೌರ ಕಾರ್ಮಿಕಪ ವೇತನ ಏರಿಸಿ, ಉಪಹಾರ ವ್ಯವಸ್ಥೆ ಮಾಡಿರುವ ಸರ್ಕಾರ ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಈ ನಿರ್ಧಾರವನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ, ಪ್ರತಿಭಟನೆ ಕೈಗೊಂಡಿರುವುದಾಗಿ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಹೇಳಿದ್ದಾರೆ.
ಪೌರ ಕಾರ್ಮಿಕರ ವೇತನಕ್ಕಾಗಿ ಸರ್ಕಾರ 350 ಕೋಟಿ ಮೀಸಲಿಟ್ಟಿರುವುದಾಗಿ ಹೇಳಿದೆ, ಆದರೆ ವೇತನ ಖಾಯಂ ಗೊಳಿಸುವ ಸಂಬಂಧ ಸರ್ಕಾರ ಯಾವುದೇ ಸರಿಯಾದ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.