ಪರಿಶೀಲನೆ ನಡೆಸುತ್ತಿರುವ ಪೊಲೀಸರು
ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ ವ್ಯಕ್ತಿ ಮಹಿಳೆಯೊಬ್ಬಳು ಸೂಸೈಡ್ ಬಾಂಬರ್ ಆಗಿದ್ದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಳೆ ಎಂದು ಹುಸಿ ಕರೆ ಮಾಡಿರುವ ಘಟನೆ ನಡೆದಿದೆ.
ಭಾನುವಾರ ರಂಜಾನ್ ಆಚರಣೆ ವೇಳೆ ಯಾವುದೇ ಅವಘಡಗಳು ಸಂಭವಿಸಬಾರದೆಂದು ಪೊಲೀಸರು ಭದ್ರತೆ ಒದಗಿಸುತ್ತಿದ್ದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಬೆಂಗಳೂರಿಗೆ ಭೇಟಿ ನೀಡಿದ್ದರು. ಹೀಗಾಗಿ ಪೊಲೀಸರು ಭದ್ರತೆ ವ್ಯವಸ್ಥೆ ಮಾಡುತ್ತಿದ್ದರು.
ಕೊಲ್ಕೊತಾ ನಿವಾಸಿ ದೇವೇಂದ್ರ ಪಾಂಚಾಲ್ ಎಂಬಾತ ಸುಮಾರು 2.30 ವೇಳೆಗೆ ಕಂಟ್ರೋಲ್ ರೂಂ ಗೆ ಮೊಬೈಲ್ ನಿಂದ ಕರೆ ಮಾಡಿದ್ದಾನೆ. ಕರ್ತವ್ಯದಲ್ಲಿದ್ದ ಡ್ಯೂಟಿ ಇನ್ಸ್ ಪೆಕ್ಟರ್ ಜೊತೆ ಮಾತನಾಡಿ, ಕೊಲ್ಕೊತದಿಂದ ಬಾಂಗ್ಲಾ ಮೂಲದ ಮಹಿಳೆ ವಿಮಾನದಲ್ಲಿ ಹೊರಟಿದ್ದು ಆಕೆ ಸೂಸೈಡ್ ಬಾಂಬರ್ ಆಗಿದ್ದಾಳೆ, ಆಕೆ ಸುಮಾರು ಸಂಜೆ 6.30 ವೇಳೆಗೆ ಬೆಂಗಳೂರು ತಲುಪಲಿದ್ದು, ಅಲ್ಲಿ ಬಾಂಬ್ ಸ್ಪೋಟಿಸಲಿದ್ದಾಳೆ ಎಂದು ಹೇಳಿ ಆಕೆಯ ಫೋನ್ ನಂಬರ್ ಮತ್ತು ಹೆಸರು ಹೇಳಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರದ ಕೇಂದ್ರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಕೆಐಎ ಅಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ, ಜೊತೆಗೆ ಶ್ವಾನದಳವನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದಾರೆ. 13 ವರ್ಷದ ಮಗನ ಜೊತೆ ಬಂದ ಮಹಿಳೆಯನ್ನು ಸಂಪೂರ್ಣವಾಗಿ ಪರೀಕ್ಷಿಸಿದ್ದಾರೆ, ನಂತಕ ಅದೊಂದು ಹುಸಿ ಕರೆ ಎಂದು ತಿಳಿದು ಬಂದಿದೆ.
ತನಿಖೆ ವೇಳೆ ದೇವೇಂದ್ರ ಪಂಚಾಲ್ ಮಹಿಳೆಗೆ ವಿಚ್ಛೇದನ ನೀಡಿದ್ದಾಗಿ ಹೇಳಿದ್ದಾರೆ. ಆತನ ಕಿರುಕುಳ ತಾಳಲಾರದೇ ಕಳೆದ ಕೆಲವು ದಿನಗಳಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಆಕೆ ಖಾಸಗಿ ಹೊಟೇಲ್ ವೊಂದರ ಉದ್ಯೋಗಿಯಾಗಿದ್ದಾರೆ. ತನ್ನ ಮಾಜಿ ಹೆಂಡತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಕಥೆ ಕಟ್ಟಿದ್ದಾನೆ. ಕೊಲ್ಕೋತಾ ಆಕೆಯ ತವರು ಮನೆಯಾಗಿದ್ದು ಇತ್ತೀಚೆಗೆ ತೆರಳಿದ್ದರು. ಹೀಗಾಗೀ ಭಾನುವಾರ ವಾಪಸ್ ಬೆಂಗಳೂರಿಗೆ ಆಗಮಿಸಿದ್ದರು.
15 ನಿಮಿಷದಲ್ಲಿ ಮೂರು ಬಾರಿ ಕರೆ ಮಾಡಿದ್ದ ದೇವೇಂದ್ರ ಪಂಚಾಲ್ ಮೊದಲ ಬಾರಿ ತಾನು ಮಾಧ್ಯಮದವನೆಂದು ಹೇಳಿಕೊಂಡಿದ್ದ, ನಂತರ ಪೊಲೀಸರು ಆತನ ಬಗ್ಗೆ ವಿಚಾರಿಸದಾಗ ಯಾವುದೇ ಮಾಹಿತಿ ನೀಡಿಲ್ಲ, ಆಗ ಅದೊಂದು ಹುಸಿ ಕರೆ ಎಂದು ತಿಳಿದು ಬಂದಿದೆ, ಆದರೂ ಚಾನ್ಸ್ ತೆಗೆದುಕೊಳ್ಳಬಾರದು ಎಂದು ನಿರ್ಧರಿಸಿ ಪರಿಶೀಲನೆ ನಡೆಸಿದ್ದಾಗಿ, ಡಿಸಿಪಿ ಹರ್ಷ ತಿಳಿಸಿದ್ದು ಶೀಘ್ರವೇ ಆತನನ್ನು ಬಂಧಿಸುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos