ಬೆಂಗಳೂರು: ಮದ್ದೂರು ರೈಲ್ವೆ ನಿಲ್ದಾಣದಲ್ಲಿ ಮದ್ದೂರು ವಡೆಯನ್ನು ಪರಿಚಯಿಸಿದ್ದ ಕುಟುಂಬ ಶತಮಾನದ ಹಿಂದಿನಷ್ಟು ಇತಿಹಾಸ ಹೊಂದಿದ್ದ ಸಸ್ಯಹಾರಿ ಫಲಹಾರ ಮಂದಿರವನ್ನು ಸ್ಥಗಿತಗೊಳಿಸಿದೆ.
ಮದ್ದೂರು ವಡೆಯನ್ನು ಪರಿಚಯಿಸಿದ್ದ ಸಸ್ಯಹಾರಿ ಫಲಹಾರ ಮಂದಿರ ಪ್ರಾರಂಭವಾಗಿ 100 ನೇ ವರ್ಷ ನಡೆಯುತ್ತಿದ್ದು, ಏ.20 ಕ್ಕೆ 100 ವರ್ಷ ಪೂರ್ಣಗೊಳಿಸುತ್ತದೆ. 2012 ರಿಂದ ರೈಲ್ವೆ ಇಲಾಖೆ ಅತಿ ಹೆಚ್ಚು ಪರವಾನಗಿ ಶುಲ್ಕ ಪಡೆಯುತ್ತಿರುವುದೂ ಸಸ್ಯಹಾರಿ ಫಲಹಾರ ಮಂದಿರ ಸ್ಥಗಿತಗೊಳಿಸುತ್ತಿರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಪರವಾನಗಿ ಶುಲ್ಕ ಹೆಚ್ಚುಗೊಂಡಿರುವುದರ ಜೊತೆಗೆ ರೈಲಿನಲ್ಲೇ ಅನಧಿಕೃತವಾಗಿ ಮದ್ದೂರು ವಡೆಯನ್ನು ಮಾರಾಟ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು, ಬೆಂಗಳೂರು-ಮೈಸೂರು ಜೋಡಿ ರೈಲು ಹಳಿ ಮಾರ್ಗವಾಗಿ ಮಾರ್ಪಾಡಾಗಿರುವುದರಿಂದ 30 ಸೆಕೆಂಡ್ ಗಳಷ್ಟು ಕಾಲದ ವರೆಗೆ ಮಾತ್ರ ರೈಲು ನಿಲುಗಡೆಯಾಗುವುದು ಸಹ ಐತಿಹಾಸಿಕ ಸಸ್ಯಹಾರಿ ಫಲಹಾರ ಮಂದಿರವನ್ನು ಮುಚ್ಚುವುದಕ್ಕೆ ಕಾರಣವಾದ ಅಂಶಗಳಾಗಿವೆ.
ರೈಲ್ವೆ ಇಲಾಖೆಯೊಂದಿಗಿನ ಒಪ್ಪಂದ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಸಸ್ಯಹಾರಿ ಫಲಹಾರ ಮಂದಿರ ಮುಚ್ಚಲ್ಪಡುತ್ತಿದ್ದು ಮದ್ದೂರು ವಡೆಯನ್ನು ಪ್ರಸಿದ್ಧಗೊಳಿಸಿದವರ ಕುಟುಂಬದವರಾದ, ಸಸ್ಯಹಾರಿ ಫಲಹಾರ ಮಂದಿರದ ಮಾಲಿಕ ಡಿ. ಜಯಪ್ರಕಾಶ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದಾರೆ. ಫಲಹಾರ ಮಂದಿರದೊಂದಿಗೆ ತಂದೆ-ಮಗನ ಬಾಂಧವ್ಯದ ರೀತಿಯ ನಂಟು ಬೆಳೆದಿದೆ ಎಂದು ಭಾವುಕರಾಗಿ ಹೇಳಿದ್ದಾರೆ. ಜಯಪ್ರಕಾಶ್ ಪ್ರಸ್ತುತ ಬೆಂಗಳೂರು-ಮೈಸೂರು ಹೈವೇ ಯಲ್ಲಿರುವ ಸತ್ಯಾಗ್ರಹ ಸೌಧದ ಬಳಿ ಮದ್ದೂರು ಟಿಫನ್ಸ್ ನಡೆಸುತ್ತಿದ್ದಾರೆ.