ಬೆಂಗಳೂರು: ಕರ್ನಾಟಕದ ಬರಗಾಲ ಪೀಡಿತ 160 ತಾಲ್ಲೂಕುಗಳಲ್ಲಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಕೂಡ ಮಧ್ಯಾಹ್ನದ ಉಚಿತ ಬಿಸಿಯೂಟ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅವಶ್ಯಕ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಅಧಿಸೂಚನೆ ಪ್ರಕಾರ, 27 ಶೈಕ್ಷಣಿಕ ಜಿಲ್ಲೆಗಳ ಬರಗಾಲ ಪೀಡಿತ ತಾಲ್ಲೂಕುಗಳಲ್ಲಿನ ಸುಮಾರು 27 ಲಕ್ಷ ಮಕ್ಕಳಿಗೆ ಇದರಿಂದ ಸಹಾಯವಾಗಲಿದೆ. ಮಧ್ಯಾಹ್ನದ ಬಿಸಿಯೂಟವನ್ನು ರಾಜ್ಯ ಸರ್ಕಾರಿ ಶಾಲೆಗಳಲ್ಲಿ ವಾರದ ಏಳೂ ದಿನಗಳ ಕಾಲ ನೀಡಲಾಗುತ್ತದೆ. ಬೇಸಿಗೆ ರಜೆಯಲ್ಲಿ ಮಧ್ಯಾಹ್ನ ಊಟದ ಹೊತ್ತಿಗೆ ಮಕ್ಕಳು ಇರುವಂತೆ ಆದೇಶ ನೀಡಬೇಕೆಂದು ಅಧಿಕಾರಿಗಳಿಗೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬೇಸಿಗೆಯಲ್ಲಿ ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ತಯಾರಿಸುವಂತೆ ಸೂಚಿಸಲಾಗಿದೆ. ಊಟಕ್ಕೆ ಕಡಿಮೆ ಮಸಾಲೆ ಪದಾರ್ಥಗಳನ್ನು ತಯಾರಿಸಲು ಹೇಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಬೇಸಿಗೆ ರಜೆಯಲ್ಲಿ ಶಾಲೆಯಲ್ಲಿ ಶಿಕ್ಷಕರು ಕೂಡ ಸರದಿ ಆಧಾರದ ಮೇಲೆ ಹಾಜರಿರುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಶಿಕ್ಷಣ ಇಲಾಖೆ ಬೇಸಿಗೆಯಲ್ಲಿ ಮಕ್ಕಳ ಮಧ್ಯಾಹ್ನ ಬಿಸಿಯೂಟಕ್ಕೆ ಶೇಕಡಾ 80ರಿಂದ 90 ಕೋಟಿ ಖರ್ಚು ಮಾಡುತ್ತದೆ. ಆದರೆ ಬೇಸಿಗೆ ರಜೆಯಲ್ಲಿ ಬರಪೀಡಿತ ತಾಲ್ಲೂಕುಗಳ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ವಿತರಿಸುವುದಿಲ್ಲ. ಒಂದು ಶಾಲೆಯನ್ನು ಅಧಿಕಾರಿಗಳು ಗುರುತಿಸಿ ಅದನ್ನು ಕೇಂದ್ರವಾಗಿಟ್ಟುಕೊಂಡು ಎಲ್ಲಾ ಮಕ್ಕಳನ್ನು ಅಲ್ಲಿಗೆ ಬರಲು ಹೇಳಲಾಗುತ್ತದೆ.