ರೂ.5 ಕ್ಕೆ ಫುಲ್ ಮೀಲ್ಸ್: ಗದಗ್'ನಲ್ಲಿ ಹೀಗೊಂದು ಸಮಾಜ ಸೇವೆ!
ಗದಗ್: ಜನಪ್ರಿಯ ಬಜೆಟ್ ಮಂಡನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಅಮ್ಮ ಕ್ಯಾಂಟೀನ್ ನಂತೆಯೇ ರಾಜ್ಯದಲ್ಲಿ ನಮ್ಮ ಕ್ಯಾಂಟೀನ್ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಸರ್ಕಾರದ ಈ ಘೋಷಣೆ ಹಲವರಲ್ಲಿ ಸಂತಸವನ್ನುಂಟು ಮಾಡಿತ್ತು. ಆದರೆ, ಗದಗ್ ನಲ್ಲಿನ ಟ್ರಸ್ಟ್ ವೊಂದು ರೂ.5 ಕ್ಕೆ ಹೊಟ್ಟೆ ತುಂಬ ಊಟ ಕೊಡುವ ಸಮಾಜ ಸೇವೆಯನ್ನು ಮಾಡುತ್ತಿದೆ.
ಗದಗ್ ನಲ್ಲಿರುವ ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಶ್ರೀ ರಾಮಕೃಷ್ಣ ಸೇವಾ ಪ್ರತಿಷ್ಠಾನದ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯ ರೂ.5 ಕ್ಕೆ ಬಡ ಜನರಿಗೆ ಹೊಟ್ಟೆ ತುಂಬ ಊಟ ಕೊಡುವ ಕೆಲಸವನ್ನು ಮಾಡುತ್ತಿದೆ. ವಯಸ್ಸಾದವರಿಗೆ, ಅಂಗವಿಕಲರಿಗೆ ಉಚಿತ ಊಟವನ್ನು ನೀಡುತ್ತಿರುವ ಈ ಟ್ರಸ್ಟ್, ರಿಯಾಯಿತಿ ದರದಲ್ಲಿ ರೂ.2 ಗೆ ಶಾಲಾ ಬಾಲಕಿಯರಿಗೂ ಊಟವನ್ನು ನೀಡುತ್ತಿದೆ.
ಪ್ರಸಾದ ಎಂಬ ಹೆಸರಿನಲ್ಲಿ ಪ್ರತೀನಿತ್ಯ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೂ ಬಡವರಿಗೆ ಊಟವನ್ನು ನೀಡಲಾಗುತ್ತಿದೆ.
ನನ್ನ ಪತ್ನಿ ಪ್ರಸಾದ ನಿಲಯದ ಕೊಂಚ ದೂರದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಕೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪತ್ನಿ ಆಸ್ಪತ್ರೆಗೆ ದಾಖಲಾದ ದಿನದಿಂದಲೂ ನಾವೂ ಇಲ್ಲಿಯೇ ಊಟವನ್ನು ಮಾಡುತ್ತಿದ್ದೇವೆ. ಊಟದ ರುಚಿ ಬಹಳ ಚೆನ್ನಾಗಿದ್ದು, ಆರೋಗ್ಯಕರ ಆಹಾರವನ್ನು ನೀಡುತ್ತಿದ್ದಾರೆ. ಪತ್ನಿಯನ್ನು ಟ್ರಸ್ಟ್ ಸದಸ್ಯರೇ ನೋಡಿಕೊಳ್ಳುತ್ತಿದ್ದಾರೆಂದು ಮಲ್ಲಸಮುದ್ರ ಗ್ರಾಮದ ನಿವಾಸಿ ಮಾರುತಿ ಕಲ್ಸಾನ್ನವರ್ ಅವರು ಹೇಳಿದ್ದಾರೆ.
ತಮ್ಮ ಸಮಾಜ ಸೇವೆ ಕುರಿತಂತೆ ಮಾತನಾಡಿರುವ ಟ್ರಸ್ಟ್ ಸದಸ್ಯರು, ಗದಗ್ ನ್ನು ಹಸಿವು ಮುಕ್ತ ನಗರವಾಗಿಸುವುದು ನಮ್ಮ ಉದ್ದೇಶವಾಗಿದೆ. ಕಳೆದ ವರ್ಷ ಜನವರಿ 20 ರಿಂದಲೇ ನಾವು ಈ ಸೇವೆಯನ್ನು ಆರಂಭಿಸಿದ್ದೇವು. ನಮ್ಮ ಸಮಾಜ ಕಾರ್ಯ ಯಶಸ್ವಿ ಹಾದಿಯಲ್ಲಿ ಸಾಗುತ್ತಿದೆ. ಟ್ರಸ್ಟ್ ಗೆ 300ಕ್ಕೂ ಹೆಚ್ಚು ಜನರು ದಾನವನ್ನು ನೀಡುತ್ತಿದ್ದಾರೆ. ಪ್ರತೀನಿತ್ಯ 600ಕ್ಕೂ ಹೆಚ್ಚು ಜನರು ಆಹಾರವನ್ನು ಸೇವಿಸುತ್ತಿದ್ದಾರೆ. ಊಟಕ್ಕೂ ಮುನ್ನ ಅನ್ನಪೂರ್ಣೇಶ್ವರಿ ದೇವಿಯ ಸ್ಮರಣೆಯನ್ನು ಮಾಡಲಾಗುತ್ತದೆ.
ಆರ್ಯ ಸಮಾಜ, ಸುಬ್ರದಕ್ಕ ಮತ್ತು ಶೈಲಜಾ ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಿದ್ದು, ಜನರಿಗೆ ಊಟವನ್ನು ನೀಡುತ್ತಿದ್ದಾರೆ. ಮಂಜುನಾಥ ಹದ್ದಣ್ಣವರ ಅವರ ಮಾರ್ಗದರ್ಶನದಲ್ಲಿ ಈ ಸಮಾಜ ಕಾರ್ಯ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos