ಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿರುವ ವೇಳೆಯೇ ರಂಗಸ್ಥಳದಲ್ಲಿಯೇ ಕುಸಿದುಬಿದ್ದು ಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (83) ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಕಟೀಲು ಸಮೀಪದ ಎಕ್ಕಾರಿನಲ್ಲಿ ಬುಧವಾರ ರಾತ್ರಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಗಂಗಯ್ಯ ಶೆಟ್ಟಿಯವರು ಅರುಣಾಸುರ ಪಾತ್ರದಲ್ಲಿದ್ದರು. ದೇವಿಯ ಅವತಾರವಾದ ಭ್ರಮರಾಂಭಿಕೆಯಿಂದ ಹತನಾಗುವ ಅರುಣಾಸುರ ಮೋಕ್ಷವನ್ನು ಪಡೆಯುವ ಸನ್ನಿವೇಶ ಅದಾಗಿತ್ತು.
ಬೆಳಿಗನ ಜಾವ 5.30ರ ವೇಳೆಗೆ ಯಕ್ಷಗಾನ ಪ್ರದರ್ಶನ ಅಂತಿಮ ಹಂತದಲ್ಲಿ ಅರುಣಾಸುರನ ಪಾತ್ರ ಮೋಕ್ಷ ಪಡೆಯುವ ಸನ್ನಿವೇಶ ಬಂದಾಗ ಪಾತ್ರಧಾರಿ ಶೆಟ್ಟರು ಅಸ್ವಸ್ಥರಾಗಿ ರಂಗಸ್ತಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ವೇಳೆ ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿಯಲ್ಲಿಯೇ ಗಂಗಯ್ಯ ಅವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
1954ರಲ್ಲಿ ಅಮ್ಮು ಶೆಟ್ಟಿ-ಕಮಲಾ ಶೆಡ್ತಿ ದಂಪತಿ ಪುತ್ರನಾಗಿ ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ಜನಿಸಿದ ಗಂಗಯ್ಯ ಅವರು, ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಪಡ್ರೆ ಚಂದು ಅವರಲ್ಲಿ ಯಕ್ಷಗಾನದ ನಾಟ್ಯವನ್ನು ಕಲಿತಿದ್ದರು. 1970ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಯಕ್ಷರಂಗ ಪ್ರವೇಶಿಸಿದ್ದರು. ಕಟೀಲು ಮೇಳದಲ್ಲೂ ವೃತ್ತಿ ಜೀವನ ಪ್ರಾರಂಭಿಸಿದ್ದರು. ಸುಮಾರು 47 ವರ್ಷಗಳ ಕಾಲ ಕಟೀಲು ಮೇಳವೊಂದರಲ್ಲೇ ಕಲಾವಿದರಾಗಿದ್ದ ಗಂಗಯ್ಯ ಅವರು, ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಪಾತ್ರದಲ್ಲಿ ಆಪಾರ ಹೆಸರನ್ನು ಗಳಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos