ಕೊಪ್ಪಳ: ಭಗ್ನ ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ನರ್ಸ್ ಕತ್ತು ಸೀಳಿ ಬಳಿಕ ಆಕೆಗೆ ಪೆಟ್ರೋಲ್ ಸುರಿದಿ ಬೆಂಕಿ ಹಚ್ಚಿದ ಘಟನೆ ಶನಿವಾರ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.
ಅದೃಷ್ಟವಶಾತ್ ಯುವತಿ ಬದುಕಿದ್ದು, ಆಕೆಯನ್ನು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವತಿ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ದಾಳಿಗೆ ಒಳಗಾದ ಯುವತಿ ಯಲಬುರ್ಗಾ ತಾಲೂಕಿನ ಚೌಡ್ಲಾಪುರ ಗ್ರಾಮದ ಶಹನಾಜ್(23) ಎಂದು ಗುರುತಿಸಲಾಗಿದ್ದು, ಕುಷ್ಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.
ಇಂದು ಶಹನಾಜ್ ಮತ್ತು ಆಕೆಯ ತಾಯಿ ಇಬ್ಬರು ಕುಷ್ಟಗಿಗೆ ತೆರಳಲು ಮುದೆನೂರ್ ಬಳಿ ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಭಗ್ನ ಪ್ರೇಮಿ ಅಮರೇಶ್, ತಾಯಿ, ಮಗಳಿಗೆ ಲಿಫ್ಟ್ ಕೊಡುವುದಾಗಿ ಹೇಳಿ, ಬೈಕ್ ಹತ್ತಿಸಿಕೊಂಡಿದ್ದಾನೆ. ಆದರೆ ಕುಷ್ಟಗಿ ಸಮೀಪ ಬರುತ್ತಿದ್ದಂತೆ ಬೈಕ್ ನಿಲ್ಲಿಸಿ, ಚಾಕುವಿನಿಂದ ಶಹನಾಜ್ ಕುತ್ತಿಗೆ ಸೀಳಿ, ತಕ್ಷಣ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾನೆ. ಆದರೆ ಶಹನಾಜ್ ತಾಯಿ ಆಕೆಯನ್ನು ರಕ್ಷಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾಳೆ.
ವರದಿಗಳ ಪ್ರಕಾರ, ಗಂಗಾವತಿ ತಾಲೂಕಿನ ಮಾರನಹಳ್ಳಿ ಗ್ರಾಮದ ಅಮರೇಶ್ ಶಹನಾಜ್ ಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಅಮರೇಶ್ ಪ್ರೀತಿಯನ್ನು ನಿರಾಕರಿಸಿದ್ದಳು. ಅಲ್ಲದೆ ಇತ್ತೀಚಿಗೆ ಬೇರೆ ಯುವಕನೊಂದಿಗೆ ಶಹನಾಜ್ ನಿಶ್ಚಿತಾರ್ಥ ಸಹ ನಡೆದಿತ್ತು ಎನ್ನಲಾಗಿದೆ.