ಬೆಂಗಳೂರು: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ನಯಾ ರೋಶಿಣಿ(ಹೊಸಬೆಳಕು) ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸುತ್ತಿದೆ.
ಹೊಸ ಬೆಳಕು(ನಯಾ ರೋಶಿಣಿ) ಯೋಜನೆಯಡಿ ಕನಿಷ್ಠ 50 ಸಾವಿರ ಅಲ್ಪಸಂಖ್ಯಾತ ಮಹಿಳೆಯರಿಗೆ ಈ ಯೋಜನೆಯ ಸವಲತ್ತು ನೀಡಲು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಘಟಕ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚು ಮೆಚ್ಚಿನ ನಯಾ ರೋಶಿಣಿ ಯೋಜನೆಯನ್ನು ಕಳೆದ ಮೂರು ವರ್ಷಗಳ ಹಿಂದೆ ಜಾರಿಗೆ ತರಲಾಯಿತು. ಆದರೆ ಯೋಜನೆಯ ಬಗ್ಗೆ ಸರಿಯಾದ ಮಾಹಿತಿಯಿಲ್ಲದ ಕಾರಣ ಕೆಲವೇ ಮಂದಿ ಮಾತ್ರ ಇದರ ಉಪಯೋಗ ಪಡೆದುಕೊಂಡಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಮತ್ತು ಅವರ ಸಬಲೀಕರಣಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಮೂಲಕ, ಜ್ಞಾನ, ಯಂತ್ರೋಪಕರಣಗಳು, ಬ್ಯಾಂಕ್, ಸೇರಿದಂತೆ ಇತರೆ ಸರ್ಕಾರಿ ಸಂಸ್ಥೆಗಳೊಂದಿಗೆ ವ್ಯವಹರಿಸುವ ಚಾತುರ್ಯ ಸೇರಿದಂತೆ ಹಲವು ವಿಷಗಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ತಂಡಗಳನ್ನು ರಚಿಸಿದ್ದು, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನೇ ನೇಮಕ ಮಾಡಲಾಗಿದೆ ಎಂದು ಬಿಜೆಪಿ ಮೈನಾರಿಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿ ಡಿಸೋಜಾ ಹೇಳಿದ್ದಾರೆ.
ಈ ತಂಡ ಮಂಡಲಗಳಿಗೆ ತೆರಳಿ ಅಲ್ಪಸಂಖ್ಯಾತ ಮಹಿಳೆಯರಿಗೆ ಈ ಯೋಜನೆಯ ಲಾಭಗಳ ಬಗ್ಗೆ ತಿಳಿಸಿಕೊಡಲಿದೆ. ಆರೋಗ್ಯ, ಶಿಕ್ಷಣ, ಬ್ಯಾಂಕ್ ಸಾಲಗಳ ಬಗ್ಗೆ ಮಾಹಿತಿ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
50 ಸಾವಿರ ಮಹಿಳೆಯರನ್ನು ಗುರಿಯಾಗಿಸಿಕೊಳ್ಳಲಾಗಿದೆ, ಸದ್ಯ ಬೆಂಗಳೂರು ನಗರದಿಂದ 1.300 ಹಾಗೂ ಶಿವಮೊಗ್ಗದಿಂದ 850 ಮತ್ತು ಕೋಲಾರದಿಂದ 300 ಮಂದಿ ಸೇರಿ ಒಟ್ಟು 5 ಸಾವಿರ ಮಹಿಳೆಯರನ್ನು ಈ ಯೋಜನೆ ತಲುಪಿದೆ ಎಂದು ಹೇಳಿದ್ದಾರೆ.
ಇಬ್ಬರು ನಾಯಕರ ಭಿನ್ನಮತದಿಂದಾಗಿ ರಾಜ್ಯ ಬಿಜೆಪಿಯಲ್ಲಿ ಗೊಂದಲ ಏರ್ಪಾಡಗಿದೆ. ನಮ್ಮ ನಾಯಕರು ಅವಕಾಶ ತೆಗೆದುಕೊಳ್ಳಲು ಬಯಸುವುದಿಲ್ಲ, ನಮಗೆ ಅಲ್ಪಸಂಖ್ಯಾತ ಮತಗಳು ಅತಿ ಮುಖ್ಯ, ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ಆರಂಭಿಸುತ್ತೇವೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ನಮ್ಮ ಪಕ್ಷ ಅಲ್ಪ ಸಂಖ್ಯಾತರ ವಿರೋಧಿಯಲ್ಲಿ, ಬಿಜೆಪಿ ಅಲ್ಪ ಸಂಖ್ಯಾತರ ಪರವಾಗಿದೆ, ನಯಾ ರೋಶಿಣಿ ಯೋಜನೆ ಅವಶ್ಯಕತೆಯಿರುವವರಿಗೆ ತಲುಪಲಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎನ್ ವಿಜಯ್ ಕುಮಾರ್ ತಿಳಿಸಿದ್ದಾರೆ.