ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ದಿಸಲು ಮಾಜಿ ಕಾರ್ಪೋರೇಟರ್ ಹಾಗೂ ರೌಡಿ ನಾಗ 50 ಕೋಟಿ ರು. ಮೌಲ್ಯದ ಹಳೇಯ ನೋಟುಗಳನ್ನು ಬದಲಾವಣೆ ಮಾಡಿಸಿಕೊಟ್ಟಿರುವುದಾಗಿ ಹೇಳಿದ್ದಾನೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ರೌಡಿ ನಾಗನನ್ನು ಬಂಧಿಸಿರುವ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಈ ಸತ್ಯವನ್ನು ಬಹಿರಂಗ ಪಡಿಸಿದ್ದಾನೆ.
ತಾನು ಉದ್ಯಮಿಗಳಿಂದ ಹಣ ಹಣ ಪಡೆದು ಅದನ್ನು ಬದಲಾಯಿಸಿಕೊಟ್ಟಿದ್ದಾಗಿ ಹೇಳಿದ್ದಾನೆ. ಆದರೆ ಈ ಮೊದಲು ಪೊಲೀಸರು ಹಾಗೂ ರಾಜಕಾರಣಿಗಳ ಹಣ ಬದಲಾಯಿಸಿಕೊಟ್ಟಿದ್ದಾಗಿ ನಾಗ ಹೇಳಿದ್ದ. ಆದರೆ ಆತನ ಮನೆಯಲ್ಲಿ ಸಿಕ್ಕ ಹಣದ ಮೂಲದ ಬಗ್ಗೆ ಮಾತ್ರ ನಾಗರ ಯಾವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ರೌಡಿ ನಾಗ ವಿಚಾರಣೆಗೆ ಸಹಕರಿಸುತ್ತಿಲ್ಲ, ತನ್ನ ರಾಜಕೀಯ ವೃತ್ತಿ ಜೀವನವನ್ನು ಹಾಳು ಮಾಡಿದ್ದರೆಂದು ಪೊಲೀಸರ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕೆ.ಆರ್ ಪುರಂ ಎಸಿಪಿ ರವಿ ಕುಮಾರ್, ರೌಡಿ ನಾಗನ ಮಾಜಿ ವಕೀಲ ಶ್ರೀರಾಮ ರೆಡ್ಡಿ ವಿರುದ್ಧ ಕೇಸು ದಾಖಲಿಸಿದ್ದಾರೆ. ರೌಡಿ ನಾಗ ಈ ಮೊದಲು ಷರತ್ತಿನ ಮೇಲೆ ಶರಣಾಗುವುದಾಗಿ ಶ್ರೀರಾಮ ರೆಡ್ಡಿ ಹೇಳಿದ್ದರು. ಆದರೆ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಶ್ರೀರಾಮರೆಡ್ಡಿ ವಿರುದ್ಧ ದೂರು ದಾಖಲಿಸಿರುವುದಾಗಿ ಕಂಪ್ಲೇಂಟ್ ನಲ್ಲಿ ಉಲ್ಲೇಖವಾಗಿದೆ.