ಕೂಡಲ ಸಂಗಮ ಪಂಚಮ ಸಾಲಿ ಪೀಠದ ಸ್ವಾಮೀಜಿ ಬಸವಜಯ ಮೃತ್ಯುಂಜಯ ಸ್ವಾಮೀಜಿ
ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮ ಕುರಿತ ಕೂಗು ಪ್ರಬಲಗೊಳ್ಳುತ್ತಿದ್ದು, ಈ ನಡುವೆ ಕೂಡಲ ಸಂಗಮ ಪಂಚಮ ಸಾಲಿ ಪೀಠದ ಸ್ವಾಮೀಜಿಯವರು ವೀರಶೈವ ಸಮುದಾಯ ಕುರಿತಂತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಹುಬ್ಬಳ್ಳಯ ನೆಹರು ಮೈದಾನದಲ್ಲಿ ನಿನ್ನೆ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ವೀರಶೈವ ಸಮುದಾಯವನ್ನು ಬಹಿರಂಗವಾಗಿ ನಿಂದಿಸಿದರು.
ವೀರಶೈವ ಸಮುದಾಯದವರು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಲಿಂಗಾಯತ ಆಗ್ರಹಗಳಿಗೆ ಈಡೇರದಂತೆ ಮಾಡುತ್ತಿದ್ದಾರೆ. ಲಿಂಗಾಯತರು ಹಿಂದೂಗಳಲ್ಲ. ಲಿಂಗಾಯತ ಎನ್ನುವುದು ಪ್ರತ್ಯೇಕ ಧರ್ಮ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಲಿಂಗಾಯತವನ್ನು ಹಿಂದೂ ಧರ್ಮವೆಂದು ಬಿಂಬಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರು, ಬಾಲೆಹೊಸೂರು ಮಠದ ಸ್ವಾಮೀಜಿ ದಿಂಗಲೇಶ್ವರ ಸ್ವಾಮೀಜಿಗಳ ವಿರುದ್ಧ ಕಿಡಿಕಾರಿದರು.
ಕೆಲ ದಿನಗಳ ಹಿಂದಷ್ಟೇ ದಿಂಗಲೇಶ್ವರ ಸ್ವಾಮೀಜಿಗಳು ಲಿಂಗಾಯತರು ಹಾಗೂ ವೀರಶೈವರು ಇಬ್ಬರೂ ಒಂದೇ ಎಂದು ಹೇಳಿದ್ದರು.
ಹೇಳಿಕೆಗೆ ತೀವ್ರವಾಗಿ ಕಿಡಿಕಾರಿರುವ ಬಸವರಾಜ ಹೊರಟ್ಟಿಯವರು, ದಿಂಗಲೇಶ್ವರ ಸ್ವಾಮೀಜಿ ಯಾರು ಎಂಬುದು ನಮಗೆ ಗೊತ್ತಿದೆ. ಈ ಹಿಂದೆ ಅವರು ಬಡ್ಡಿ ವ್ಯವಹಾರಗಳನ್ನು ಮಾಡುತ್ತಿದ್ದರು. ಬಳಿಕ ಶ್ರೀಗಳಾಗಿದ್ದರು. ಅಲ್ಲದೆ, ಮೂರುಸಾವಿರ ಮಠದ ಮಠಾಧೀಶರಾಗಲು ಕಾನೂನುಬಾಹಿರ ಹಾದಿಗಳನ್ನು ಬಳಸಿದ್ದರು ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos