ಬೆಂಗಳೂರು: 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾರು ಚಾಲಕನನ್ನು ವಿದ್ಯಾರ್ಥಿನಿಯ ಗೆಳೆಯರು ಸೋಲದೇವನಹಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಕಾರು ಚಾಲಕನಾದ ಶರತ್ ಸೋಮವಾರ ಬೆಳಗಿನ ಜಾವ ವಿದ್ಯಾರ್ಥಿನಿಯ ಮನೆಗೆ ನುಗ್ಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಆಕೆಯ ಕತ್ತು ಹಿಸುಕುವ ಮೂಲಕ ಆಕೆಯನ್ನು ಹತ್ಯೆ ಮಾಡುವುದಕ್ಕೂ ಪ್ರಯತ್ನಿಸಿದ್ದನು. ಹೆಸರಘಟ್ಟ ಮುಖ್ಯರಸ್ತೆಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಈ ಘಟನೆಯಿಂದ ಆಘಾತಗೊಂಡಿದ್ದು ಕಾಲೇಜು ವಿದ್ಯಾಭಾಸವನ್ನು ಅರ್ಧಕ್ಕೆ ತೊರೆದು ಹೋಗಿದ್ಡಾಳೆ.
ಆರೋಪಿ ಶರತ್ ಮೂಲತಃ ಭದ್ರಾವತಿಯವನಾಗಿದ್ದು ಕಳೆದ ಒಂದೂವರೆ ವರ್ಷದಿಂದ ಕೊಡಿಗೇಹಳ್ಳಿ ಯಲ್ಲಿ ನೆಲೆಸಿದ್ದನು.
ಚಿಕ್ಕಬಾಣಾವರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದ ವಿದ್ಯಾರ್ಥಿನಿ ಮನೆ ಇದ್ದ ಕಟ್ಟಡದಲ್ಲಿಯೇ ಆರೋಪಿಯ ಸ್ನೇಹಿತನ ಮನೆಯೂ ಇತ್ತು. ಭಾನುವಾರ ರಾತ್ರಿ ಆರೋಪಿಯು ಸ್ನೇಹಿತನ ಮನೆಗೆ ಬಂದಿದ್ದು ಅಲ್ಲಿ ಪಾರ್ಟಿ ನಡೆಸಿದ್ದರೆನ್ನಲಾಗಿದೆ. ತಡರಾತ್ರಿಯವರೆಗೆ ಪಾರ್ಟಿ ನಡೆದ ಬಳಿಕ ಆರೋಪಿ ಕುಡಿದ ಅಮಲಿನಲ್ಲೇ ವಿದ್ಯಾರ್ಥಿನಿಯ ಮನೆ ಬಾಗಿಲು ಬಡಿದಿದ್ದಾನೆ. ಆಕೆ ಬಾಗಿಲು ತೆರೆಯುತ್ತಿದ್ದಂತೆ ಒಳನುಗ್ಗಿ ದೌರ್ಜನ್ಯ ಎಸಗಿದ್ದಾನೆ ಎಂದು ಪೋಲೀಸರು ಮಾಹಿತಿ ನೀಡಿದರು.