ಅಚ್ಛೇ ದಿನ್ ಎಲ್ಲಿದೆ? ಕೇಂದ್ರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದೆ ಈ ಗ್ರಾಮ!
ಹಳಿಯಾಲ: ನೋಟು ನಿಷೇಧವಾಗಿ ಒಂದು ವರ್ಷವಾದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಇಲ್ಲೊಂದು ಗ್ರಾಮ ಈಗಲೂ ಕೇಂದ್ರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದೆ.
ಭಯೋತ್ಪಾದನೆಗೆ ಹೊಡೆತ ನೀಡಲು ಹಾಗೂ ಕಪ್ಪು ಹಣಕ್ಕೆ ಕಡಿವಾಣ ಹಾಕುವ ಸಲುವಾಗಿಯೇ ಕೇಂದ್ರ ಸರ್ಕಾರ ತೆಗೆದುಕೊಂಡ ಡಿಮಾನಿಟೈಸೇಷನ್ (ನೋಟು ನಿಷೇಧ) ನಿರ್ಧಾರ ತೆಗೆದುಕೊಂಡ ಬಳಿಕ ಹಣವಿಲ್ಲದೆ ವಹಿವಾಟು ನಡೆಸಲು ದೇಶದ ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತ್ತು.
ಕೇಂದ್ರದ ನೋಟು ನಿಷೇಧ ನಿರ್ಧಾರಕ್ಕೆ ಆರಂಭದಲ್ಲಿ ಪ್ರತಿಯೊಬ್ಬರೂ ಬೆಂಬಲ ವ್ಯಕ್ತಪಡಿಸಿದ್ದರಾದರೂ, ನಂತರ ದಿನಗಳಲ್ಲಿ ಎದುರಾದ ಸಮಸ್ಯೆಗಳಿಂದ ಬೇಸತ್ತ ಜನರು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದರು. ಹೊಸ ನೋಟುಗಳ ಚಲಾವಣೆ ಆರಂಭವಾಗುತ್ತಿದ್ದಂತೆಯೇ ದಿನಗಳ ಕಳೆದಂತೆ ನಗರವಾಸಿಗಳ ಸಮಸ್ಯೆಗಳೇ ಕಡಿಮೆಯಾಗ ತೊಡಗಿತು. ಆದರೆ, ಈಗಲೂ ರಾಜ್ಯ ಕೆಲ ಗ್ರಾಮಗಳ ಜನರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ತೆಗೆದುಕೊಂಡ ನೋಟು ನಿಷೇಧ ನಿರ್ಧಾರಕ್ಕೆ 1 ವರ್ಷವಾದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹಳಿಯಾಲ ಗ್ರಾಮದ ಜನರು ಕೇಂದ್ರದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದು, ಅಚ್ಛೇ ದಿನ್ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ತತ್ವನಾಗಿ ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ ಹಲಿಯಾಲ ಎಂಬ ಗ್ರಾಮ ರೂ.2,000 ಹೊಸ ನೋಟುಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ.
ರೂ.2,000ಕ್ಕೆ ಚಿಲ್ಲರೆ ಸಿಗದೆ ಗ್ರಾಮಸ್ಥರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮದಲ್ಲಿರುವ ಎಟಿಎಂ ಹಾಗೂ ಬ್ಯಾಂಕ್ ಗಳಲ್ಲಿ ಕೇವಲ ರೂ.2,000 ನೋಟುಗಳು ಮಾತ್ರ ಸಿಗುತ್ತಿದ್ದು, ದೊಡ್ಡ ದೊಡ್ಡ ನೋಟುಗಳಿಂದ ಎದುರಾಗುತ್ತಿರುವ ಸಮಸ್ಯೆಯಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ದೊಡ್ಡ ನೋಟುಗಳನ್ನು ಬಳಕೆ ಮಾಡುವುದರಿಂದ ಹಣವನ್ನು ಉಳಿತಾಯ ಮಾಡುವುದು ಬಹಳ ಕಷ್ಟವಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಮಾದಪ್ಪ ಎಂಬುವವರು ಹೇಳಿದ್ದಾರೆ.
ತತ್ವನಾಗಿಯಲ್ಲಿ ಅಂಗಡಿಯನ್ನು ನಡೆಸುತ್ತಿರುವ ವ್ಯಾಪಾರಸ್ಥರೊಬ್ಬರು ಮಾತನಾಡಿ, ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ಬಳಿಕ ಸಾಕಷ್ಟು ಸಮಸ್ಯೆಗಳು ಎದುರಾಗಿದೆ. ಅಂಗಡಿಗೆ ಬರುವ ಸಾಕಷ್ಟು ಮಂದಿ ರೂ.2,000 ನೋಟುಗಳನ್ನು ತರುತ್ತಾರೆ. ಚಿಲ್ಲರೆ ನೀಡಲು ಸಾಧ್ಯವಾಗದೆ ವ್ಯಾಪಾರದ ಮೇಲೂ ಗಂಭೀರ ಹೊಡೆತ ಬೀಳುತ್ತಿದೆ ಎಂದು ಹೇಳಿದ್ದಾರೆ.
ತತ್ವನಾಗಿ ಪಂಚಾಯತಿಯಡಿಯಲ್ಲಿ ಒಟ್ಟು 7 ಗ್ರಾಮಗಳು ಬರುತ್ತವೆ. ಗ್ರಾಮಗಳ ಒಟ್ಟಾರೆ ಜನಸಂಖ್ಯೆ 800 ಇದೆ. ಮಾರುಕಟ್ಟೆಯಲ್ಲಿ ಹಣವಿಲ್ಲದೆ ಕೃಷಿ ಉತ್ಪನ್ನಗಳ ಮೇಲೂ ಪರಿಣಾಮ ಬೀರಿದೆ. ಪ್ರಸಕ್ತ ತಿಂಗಳು ಕಬ್ಬನ್ನು ಬೆಳೆಯುವ ಸಮಯವಾಗಿದ್ದು, ಕೂಲಿ ಕಾರ್ಮಿಕರೆಲ್ಲರೂ ಕೆಲಸಕ್ಕೆ ಬರುತ್ತಾರೆ. ಕಾರ್ಮಿಕರಿಗಾಗಿ ತಿಂಗಳಾನುಗಟ್ಟಲೆ ಊಟ, ವಸತಿಗಳನ್ನು ನೀಡಬೇಕು. ಗುತ್ತಿಗೆದಾರರು ಕಾರ್ಮಿಕರಿಗೆ ಚೆಕ್ ಹಾಗೂ ಡಿಜಿಟಲ್ ಮೂಲಕ ಹಣವನ್ನು ನೀಡಲು ಮುಂದಾದರೂ ಕಾರ್ಮಿಕರು ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ. ಅಚ್ಛೇ ದಿನ್ ಎಲ್ಲಿದೆ? ಈಗಲೂ ನಾವು ಎಟಿಎಂ ಹಾಗೂ ಬ್ಯಾಂಕ್ ಗಳಿಲ್ಲದೆಯೇ ಬದುಕುತ್ತಿದ್ದೇವೆ. ಪ್ರತಿಯೊಂದಕ್ಕೂ ನಾವು ಹೆಚ್ಚಿನ ಹಣವನ್ನು ವ್ಯಯಿಸಬೇಕು ಎಂದು ಗ್ರಾಮಸ್ಥರೊಬ್ಬರು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos