ಬೆಂಗಳೂರು: ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಈಗ ಮೂರನೇ ಬಾರಿಗೆ ಸಮ-ಬೆಸ ಸಂಖ್ಯೆಯ ನಿಯಮ ಜಾರಿಗೆ ತರುತ್ತಿದ್ದು, ಈ ಬಾರಿ ಅಲ್ಲಿ ಯಶಸ್ವಿಯಾದರೆ ಅದನ್ನು ಬೆಂಗಳೂರಿನಲ್ಲೂ ಜಾರಿಗೊಳಿಸುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಸಮ-ಬೆಸ ನಿಯಮ ದೆಹಲಿಯ ಮಾಲಿನ್ಯ ನಿಯಂತ್ರಿಸುತ್ತದೆ ಎಂಬುದು ಸಾಬೀತಾದರೆ, ಅದನ್ನು ಬೆಂಗಳೂರಿನಲ್ಲೂ ಜಾರಿಗೊಳಿಸುವಂತೆ ಸಾರಿಗೆ ಇಲಾಖೆಗೆ ಸೂಚಿಸಲಾಗುವುದು ಮತ್ತು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಂತಹ ನಗರಗಳಲ್ಲಿ ಕೇವಲ ಸಮ-ಬೆಸ ನಿಯಮದಿಂದ ಮಾತ್ರ ಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ವಾಹನಗಳ ಪ್ರಮಾಣ ಕಡಿಮೆಯಾಗಬೇಕು. 2013ರಲ್ಲಿ ನಗರದಲ್ಲಿ 54 ಲಕ್ಷ ವಾಹನಗಳಿದ್ದವು. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 12 ಲಕ್ಷ ವಾಹನಗಳು ಹೆಚ್ಚಾಗಿವೆ ಎಂದು ಈ ಹಿಂದೆ ಸಾರಿಗೆ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಅಪಾಯದ ಮಟ್ಟಕ್ಕೆ ಏರಿದ್ದು, ಅದನ್ನು ತಡೆಯುವುದಕ್ಕಾಗಿ ದೆಹಲಿ ಸರ್ಕಾರ ನವೆಂಬರ್ 13ರಿಂದ 5 ದಿನಗಗಳ ಕಾಲ ಸಮ-ಬೆಸ ನಿಯಮ ಜಾರಿಗೆ ತರುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos