ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಸಾಮಾನ್ಯ ಜನರಿಗೂ ಏರ್ ಆ್ಯಂಬುಲೆನ್ಸ್ ಸೇವೆಗಳು ದೊರೆಯುವಂತೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು ನಗರದ ಪ್ರಮುಖ ಸ್ಥಳಗಳಲ್ಲಿ ಹಾಗೂ ಜನಪ್ರಿಯ ಆಸ್ಪತ್ರೆಗಳಲ್ಲಿ 8 ಹೆಲಿಪ್ಯಾಡ್ ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಗಿದೆ. ನಗರದಲ್ಲಿ ಸಂಚಾರ ದಟ್ಟಣೆಯಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಈ ಹೆಲಿಪ್ಯಾಡ್ ಗಳು ನೆರವಿಗೆ ಬರಲಿದೆ. ಇದಲ್ಲದೆ, ನಗರಕ್ಕೆ ಗಣ್ಯರು ಬಂದಾಗ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಕೂಡಾ ಇದು ಸಹಾಯಕವಾಗಲಿದೆ. ಎಂದು ಹೇಳಿದ್ದಾರೆ.
ಹೆಲಿಪ್ಯಾಡ್ ಗಳನ್ನು ನಿರ್ಮಿಸುವ ಸ್ಥಳಗಳಲ್ಲಿ ಸ್ಟೇರ್ ಕೇಸ್, ವೀಲ್ ಚೇರ್, ವೈದ್ಯಕೀಯ ಕೊಠಡಿಗಳು ಸೇರಿದಂತೆ ಇನ್ನಿತರೆ ಪ್ರಮುಖ ಸೇವೆಗಳನ್ನು ಒದಗಿಸಲಾಗುತ್ತದೆ. ಹೆಲಿಪ್ಯಾಡ್ ಗಳ ಕೆಳಗೆ ಆ್ಯಂಬುಲೆನ್ಸ್ ಗಳನ್ನು ನಿಲ್ಲಿಸಲಾಗಿರುತ್ತದೆ. ಖಾಸಗಿ ಆ್ಯಂಬುಲೆನ್ಸ್ ಗಳು, ಬಿಬಿಎಂಪಿ ಕೂಡ ಆ್ಯಂಬುಲೆನ್ಸ್ ಗಳನ್ನು ಒದಗಿಸಲಿದೆ. ಖಾಸಗಿ ಸಂಸ್ಥೆಗಳು ಹೆಲಿಕಾಪ್ಟರ್ ಗಳನ್ನು ನಿರ್ಮಿಸುತ್ತಿವೆ ಎಂದು ತಿಳಿಸಿದ್ದಾರೆ.
ಯೋಜನೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ. ಯೋಜನೆಗೆ ನಾಗರೀಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಏರ್ ಟ್ರಾಫಿಕ್ ಕಂಟೋರ್, ಅಗ್ನಿ ಶಾಮಕ ದಳದ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳ ಅನುಮತಿಗ ಅಗತ್ಯವಿದೆ. ಯೋಜನೆ ಕುರಿತಂತೆ ಈಗಾಗಲೇ ಚರ್ಚೆಗಳು ನಡೆಯುತ್ತಿದ್ದು, ಎಲ್ಲಾ ಇಲಾಖೆಗಳಿಂದಲೂ ಅನುಮತಿ ಪಡೆಯುತ್ತಿದ್ದಂತೆಯೇ ಯೋಜನೆಯನ್ನು 5-6 ತಿಂಗಳೊಳಗಾಗಿ ಪೂರ್ಣಗೊಳಿಸಲಾಗುತ್ತದೆ ಎಂದಿದ್ದಾರೆ.