ರಾಜ್ಯ

ಕೆಪಿಎಂಇ ತಿದ್ದುಪಡಿ ಮಸೂದೆಗೆ 16 ಸಂಘಟನೆಗಳ ಬೆಂಬಲ

Manjula VN
ಬೆಳಗಾವಿ: ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರ ಉದ್ದೇಶಿಸಿರುವ ಕೆಪಿಎಂಇ ಮಸೂದೆಗೆ 16 ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಮಸೂದೆಯು ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಲಿದೆ ಎಂದು ಹೇಳಿಕೊಂಡಿವೆ. 
ವಿಧೇಯಕ ಕುರಿತಂತೆ ಸಾಹಿತಿ ದೇವನೂರು ಮಹಾದೇವ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಸೇರಿದಂತೆ ಪ್ರಗತಿಪರ ಸಾಹಿತಿಗಳು, ದಲಿತಪರ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದು, ಯಾವುದೇ ಲಾಬಿಗೆ ಒಳಗಾಗದೇ ವಿಧೇಯಕವನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ, 
ಖಾಸಗಿ ಆಸ್ಪತ್ರೆಗಳು ರಾಜ್ಯದಲ್ಲಿ ಬಡವರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿದ್ದು, ವೈದ್ಯಕೀಯ ಸಹಾಯದ ನೆಪದಲ್ಲಿ ದುಬಾರಿ ಚಿಕಿತ್ಸಾ ಪ್ರಕ್ರಿಯಗಳನ್ನು ನಡೆಸಿ ರೋಗಿಗಳಿಗೆ ಅನಗತ್ಯ ಪರೀಕ್ಷೆಗಳು, ಅನಗತ್ಯ ವೈದ್ಯಕೀಯ ಚಿಕಿತ್ಸೆಗಳನ್ನು ನೀಡುತ್ತಿದೆ ಇವುಗಳಿಗೆ ಕಡಿವಾಣ ಹಾಕುವ ಅಗತ್ಯವಿದ್ದು, ವಿಧೇಯಕವನ್ನು ಜಾರಿಗೆ ತರುವಂತೆ ಪತ್ರದಲ್ಲಿ ತಿಳಿಸಿದ್ದಾರೆಂದು ತಿಳಿದುಬಂದಿದೆ. 
ತಿದ್ದುಪಡಿಯಾಗಿರುವ ಮಸೂದೆಯನ್ನು ಜಾರಿಗೆ ತರುವುದರಿಂದ ಬಡವರಿಗೆ ಸಹಾಯವಾಗಲಿದೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ವೈದ್ಯರು ಹಾಗೂ ಆಸ್ಪತ್ರೆಗಳು ಪ್ರತಿಭಟನೆ ನಡೆಸುತ್ತಿರುವುದು ನಿಜಕ್ಕೂ ಬೇಸರವನ್ನು ತಂದಿದೆ. ಇಂತಹ ಒತ್ತಡಗಳನ್ನು ಬದಿಗೊತ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಸೂದೆಯನ್ನು ಜಾರಿಗೆ ತರಬೇಕಿದೆ ಎಂದು ತಿಳಿಸಿಲಾಗಿದೆ. 
ಪತ್ರದಲ್ಲಿ ಕರ್ನಾಟಕ ಜನಾರೋಗ್ಯ ಚಳುವಳಿ, ಪರ್ಯಾಯ ಕಾನೂನು ವೇದಿಕೆ, ಕೊಳಗೇರಿ ಜನಾಂದೋಲನ ಕರ್ನಾಟಕ, ಕರ್ನಾಟಕ ಜನಶಕ್ತಿ, ಸ್ವರಾಜ್ ಅಭಿಯಾನ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ, ಮಹಿಳಾ ಮುನ್ನಡೆ, ಗಾರ್ಮೆಂಟ್ ಮತ್ತು ಟೆಕ್ಸ್ಟೈಲ್ ಕಾರ್ಮಿಕ ಸಂಘ, ಸಫಾಯ್ ಕರ್ಮಾಚಾರಿ ಕವಲು ಸಮಿತಿ, ಸಂಗಮ, ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಇನ್ನಿತರೆ ಸಂಘಟನೆಗಳು ಸಹಿ ಮಾಡಿವೆ. 
SCROLL FOR NEXT