ಬೆಳಗಾವಿ: ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಬೇಕು ಎಂಬ ವಿಚಾರ ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಆಡಳಿತರೂಢ ಕಾಂಗ್ರೆಸ್ ಸದ್ಯಸರ ನಡುವೆ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ‘ಮದ್ಯ’ದ ಗಲಾಟೆಗೆ ಅರ್ಧ ದಿನದ ಕಲಾಪ ಬಲಿಯಾಯಿತು.
ಮದ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾಡಿದ ಆರೋಪವನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು.
ರಾಜ್ಯದಲ್ಲಿ ಮದ್ಯ ನಿಷೇಧಿಸಬೇಕು ಎಂಬ ಬಿಜೆಪಿ ಶಾಸಕ ಸಿ.ಟಿ.ರವಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಮದ್ಯ ನಿಷೇಧ ಅಸಾಧ್ಯ. ಮದ್ಯ ನಿಷೇಧ ನಿರ್ಧಾರವು ಎಲ್ಲಿಯೂ ಯಶಸ್ವಿಯಾಗಿಲ್ಲ. ಗುಜರಾತನ್ನೇ ಗಮನಿಸಿ, ಅದೆಷ್ಟು ಪರಿಣಾಮಕಾರಿಯಾಗಿ ಮದ್ಯ ಮಾರಾಟದ ನಿಷೇಧ ಅನುಷ್ಟಾನಗೊಂಡಿದೆ ಎಂಬುದನ್ನೂ ಸ್ವತಃ ಪರಿಶೀಲಿಸಿ ಎಂದರು. ಅಲ್ಲದೆ ಮದ್ಯ ನಿಷೇಧದ ಕುರಿತು ರಾಷ್ಟ್ರೀಯ ನೀತಿ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುವಂತೆ ಬಿಜೆಪಿಗೆ ಸಲಹೆ ನೀಡಿದರು. ‘ಈ ಕುರಿತು ರಾಷ್ಟ್ರೀಯ ನೀತಿ ರೂಪಿಸಿದರೆ, ಕರ್ನಾಟಕ ಅದನ್ನು ಬೆಂಬಿಸಲಿದೆ’ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮದ್ಯ ನಿಷೇಧ ತೀರ್ಮಾನ ಮಾಡುವಾಗ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮದ್ಯ ನಿಷೇಧಕ್ಕೆ ವಿರುದ್ಧವಾಗಿದ್ದರು ಎಂದು ಸಿಎಂ ಆರೋಪಿಸಿದರು. ಮುಖ್ಯಮಂತ್ರಿಗಳ ಈ ಹೇಳಿಕೆ ಆಡಳಿತ ಹಾಗೂ ಬಿಜೆಪಿ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.
ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಅವರು ಹೇಳುತ್ತಿರುವುದು ಅತಿ ಸುಳ್ಳು. ಈ ರೀತಿ ಸದನಕ್ಕೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಸದನದ ಸದಸ್ಯರಲ್ಲದವರ ಹೆಸರನ್ನು ಪ್ರಸ್ತಾಪಿಸುವುದು ಎಷ್ಟು ಸರಿ, ಅವರ ಮಾತುಗಳನ್ನು ಕಡತದಿಂದ ತೆಗೆಯಬೇಕು ಎಂದು ಪ್ರತಿಪಕ್ಷದ ನಾಯಕ ಜಗದೀಶ್ಶೆಟ್ಟರ್ ಆಗ್ರಹಿಸಿ, ಅವರಿಗೆ ಸಾಥ್ ನೀಡಿದ ಬಿಜೆಪಿ ಸದಸ್ಯರು ಸದನ ಬಾವಿಗೆ ಇಳಿದು ಧರಣಿ ನಡೆಸಿದರು. ಇದರಿಂದಾಗಿ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಕೆಲ ಕಾಲ ಸದನವನ್ನು ಮುಂದೂಡಿದರು.
ಕಲಾಪ ಪುನಾಃ ಆರಂಭವಾದ ನಂತರ ಮಾತನಾಡಿದ ಜೆಡಿಎಸ್ ಶಾಸಕ ವೈ.ಎಸ್.ವಿ. ದತ್ತ ಅವರು ಮದ್ಯ ನಿಷೇಧಕ್ಕೆ ಯಡಿಯೂರಪ್ಪ ವಿರೋಧವಾಗಿದ್ದರು ಎಂಬುದನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಹೇಳಿದ್ದು, ಬಿಜೆಪಿ ಸದಸ್ಯರ ಆಕ್ಷೇಪಕ್ಕೆ ಕಾರಣವಾಗಿ ಸದನದಲ್ಲಿ ಮತ್ತೆ ಗದ್ದಲ ಜೋರಾಯಿತು.
ಜೆಡಿಎಸ್ನ ದತ್ತ ಅವರು ಈ ಮಾತುಗಳನ್ನು ಹೇಳುವಾಗ ಕುಮಾರಸ್ವಾಮಿ ಸದನದಲ್ಲಿ ಇದ್ದರಾದರೂ ಅವರು ಈ ಬಗ್ಗೆ ಏನನ್ನೂ ಮಾತನಾಡದೇ ಮೌನವಾಗಿ ಕುಳಿತಿದ್ದರು. ಬಿಜೆಪಿ ಸದಸ್ಯರ ವರ್ತನೆಯಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಲ ಸಚಿವರುಗಳು, ಇದೇನಿದು ಎಲ್ಲದ್ದಕ್ಕೂ ಈ ರೀತಿ ಆಡುತ್ತಾರೆ. ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುವುದು ಬಿಜೆಪಿಯವರು. ನಾವಲ್ಲ ಎಂದು ತಮ್ಮ ಹೇಳಿಕೆಯನ್ನು ಗಟ್ಟಿಯಾಗಿ ಸಮರ್ಥಿಸಿಕೊಂಡರು.
ಇದೇ ವೇಳೆ ಮದ್ಯ ಮಾರಾಟದಿಂದ ಸರ್ಕಾರಕ್ಕೆ 11,000 ಕೋಟಿ ರುಪಾಯಿ ಆದಾಯ ಗಳಿಕೆಯಾಗಿರುವುದಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ವಿಧಾನಸಭೆಗೆ ಮಾಹಿತಿ ನೀಡಿದರು.