ಶೃಂಗಸಭೆಯಲ್ಲಿ ವಸ್ತು ಪ್ರದರ್ಶನ
ಬೆಂಗಳೂರು: ಕಳೆದ 4 ವರ್ಷಗಳಲ್ಲಿ ರಾಜ್ಯದಲ್ಲಿ ಸಣ್ಣ, ಅತಿ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಯಲ್ಲಿ 14ಲಕ್ಷ ಉದ್ಯೋಗಾವಕಾಶವನ್ನು ಸೃಷ್ಟಿಸಲಾಗಿದೆ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆಯವರು ಗುರುವಾರ ಹೇಳಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಆರಂಭಗೊಂಡ 2 ದಿನಗಳ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿರುವ ಅವರು, ವಿಶ್ವದ ದೇಶಗಳ ಹೂಡಿಕೆದಾರರನ್ನು ಆಕರ್ಷಿಸುವ ಶಕ್ತಿ ರಾಜ್ಯಕ್ಕಿದೆ. ಉದ್ಯೋಗಾವಕಾಶವನ್ನು ಸೃಷ್ಟಿಸುವುದು ಈ ಹಿಂದೆ ರಾಜ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ನಮ್ಮ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ 14 ಲಕ್ಷ ಉದ್ಯೋಗಾವಕಾಶವನ್ನು ಸೃಷ್ಟಸಿದೆ. ಮುಂದಿನ ವರ್ಷದಲ್ಲಿ 5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ ಎಂದು ಹೇಳಿದ್ದಾರೆ.
ಉದ್ಯೋಗವಾಕಾಶ ಸೃಷ್ಟಿಸುವುದು ಇಂದಿಗೂ ದೊಡ್ಡ ಸವಾಲಾಗಿ ಪರಿಣಮಿಸಿತೆ. ಇದೀಗ ಉದ್ಯೋಗವಕಾಶ ಸೃಷ್ಟಿಸುವ ಮಾರ್ಗವನ್ನು ಪತ್ತೆ ಮಾಡಿದ್ದೇವೆ. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇರುವುದು ಭಾರತದಲ್ಲಿ. ಉದ್ಯೋಗ ಸೃಷ್ಟಿಸುವವರು ಹಾಗೂ ಉದ್ಯಮಿಗಳು ರಾಜ್ಯಕ್ಕೆ ಬೇಕಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿರುವ ವೋಲ್ವೋ ಗ್ರೂಪ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಲಿ ಅವರು, ಕಂಪನಿಗಳಿಗೆ ಕರ್ನಾಟಕ ಮೊದಲ ಆಯ್ಕೆಯಾಗಿದೆ. ಪರಿಣಿತ ಉದ್ಯೋಗಿಗಳು, ಶೈಕ್ಷಣಿಕ ಸಂಸ್ಥೆಗಳು, ಶೈಕ್ಷಣಿಕ ಮೂಲಭೂತ ಸೌಕರ್ಯಗಳು ಹಾಗೂ ಉತ್ತಮ ಹವಾಮಾನ, ಕಾನೂನು ಮತ್ತು ಸುವ್ಯವಸ್ಥೆಯಿರುವ ವಾತಾವರಣ ಉದ್ಯಮಿಗಳನ್ನು ಆಕರ್ಷಿಸುತ್ತಿವೆ ಎಂದು ಹೇಳಿದ್ದಾರೆ.
2 ದಿನಗಳ ಕಾಲ ಈ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ 300 ಬೃಹತ್ ಕೈಗಾರಿಗೆ ಹಾಗೂ 700 ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಜವಳಿ, ಬಾಹ್ಯಾಕಾಶ ವಿವಿಧ ಸಣ್ಣ ಪ್ರಮಾಣದ ಬಿಡಿ ಭಾಗಗಳು, ವಾಹನಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ನೂರಾರು ಸಂಖ್ಯೆಯ ಗುಡಿ ಕೈಗಾರಿಕೆಗಳ ಮಳಿಗೆಗಳು ಸಮಾವೇಶದ ವಿಶೇಷತೆಯಾಗಿದೆ.