ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಾಲಕ ದರ್ಶನ್ ನ ಮೃತದೇಹಕ್ಕಾಗಿ ಕಾಯುತ್ತಿದ್ದ ಮನೆಯವರು
ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದ ಹತ್ತಿರ ಬಸ್ಸಿಗೆ ಸ್ಕೂಟರ್ ಡಿಕ್ಕಿ ಹೊಡೆದು 9 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ನಿನ್ನೆ ನಡೆದಿದ್ದು, ಬಸ್ ಚಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ದರ್ಶನ್ ಮತ್ತು ಆತನ ತಂಗಿ 4 ವರ್ಷದ ನಿಹಾರಿಕಾ ತಮ್ಮ ತಾತ ಟಿ.ಬಿ.ರಾಜಣ್ಣ ಜೊತೆ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದರು. ರಾಜಣ್ಣ ಅವರು ಮೊಮ್ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ತಮ್ಮ ಮನೆ ಕಾಟನ್ ಪೇಟೆ ಕಡೆಗೆ ಬರುತ್ತಿದ್ದರು. ಈ ಘಟನೆ ನಿನ್ನೆ ಮಧ್ಯಾಹ್ನ 12.15ರ ಸುಮಾರಿಗೆ ನಡೆದಿದ್ದು ತಾತ ಹೆಲ್ಮೆಟ್ ಧರಿಸಿದ್ದರೆ ಮೊಮ್ಮಕ್ಕಳು ಧರಿಸಿರಲಿಲ್ಲ. ಸ್ಕೂಟರ್ ನಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್ ಹತ್ತಿರ ಹೋಗುವಾಗ ಅವರ ಎದುರಿಗೆ ಕೆಎಸ್ ಆರ್ ಟಿಸಿ ಬಸ್ಸೊಂದು ಯು ಟರ್ನ್ ತೆಗೆದುಕೊಳ್ಳುತ್ತಿತ್ತು.
ಸ್ಕೂಟರ್ ಬಸ್ಸಿಗೆ ಡಿಕ್ಕಿ ಹೊಡೆಯಿತು. ಆಗ ರಾಜಣ್ಣ ಮತ್ತು ನಿಹಾರಿಕಾ ಬಸ್ಸಿನ ಎಡಬದಿಗೆ ಮತ್ತು ದರ್ಶನ್ ಬಲಬದಿಗೆ ಬಿದ್ದರು. ಡಿಕ್ಕಿ ಹೊಡೆದ ಕೂಡಲೇ ಬಸ್ಸಿನ ಚಾಲಕ ಬ್ರೇಕ್ ಹಾಕಿದರೂ ಕೂಡ ದರ್ಶನ್ ಮೇಲೆ ಬಸ್ಸಿನ ಹಿಂಬದಿ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟನು. ರಾಜಣ್ಣ ಮತ್ತು ನಿಹಾರಿಕಾ ಸಣ್ಣಪುಟ್ಟ ಗಾಯಗಳಿಂದ ಪಾರಾದರು.
ಅಲ್ಲಿ ಜನ ಸೇರುತ್ತಿದ್ದಂತೆ ಬಸ್ಸಿನ ಚಾಲಕ ವಿಜಯ್ ಕುಮಾರ್ ಸ್ಥಳದಿಂದ ಪರಾರಿಯಾದರು. ನಂತರ ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಶರಣಾದರು. ಬಸ್ ಚಾಲಕನ ವಿರುದ್ಧ ಕೇಸು ದಾಖಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos