ಬೆಂಗಳೂರು: ಕಾರು ಅಪಘಾತ ಹಾಗೂ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ, ಉದ್ಯಮಿ ದಿವಂಗತ ಆದಿಕೇಶವುಲು ಮೊಮ್ಮಗ ಗೀತ ವಿಷ್ಣುಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕಾರು ಅಪಘಾತ ಎಸಗಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಉದ್ಯಮಿ ಆದಿಕೇಶವಲು ಮೊಮ್ಮಗ ಗೀತಾ ವಿಷ್ಣುವನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದು ಇಂದು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ನ್ಯಾಯಮೂರ್ತಿ ವೆಂಕಟಗಿರಿ ಅವರು ಗೀತ ವಿಷ್ಣುಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದರು. ಇಬ್ಬರ ಶ್ಯೂರಿಟಿ ಹಾಗೂ 25 ಸಾವಿರ ರುಪಾಯಿ ಬಾಂಡ್ ಸಲ್ಲಿಸಲು ನ್ಯಾಯಧೀಶರು ಸೂಚಿಸಿದ್ದಾರೆ. ಅಲ್ಲದೇ ಸಾಕ್ಷ್ಯ ನಾಶ ಮಾಡಬಾರದು, ತನಿಖೆಗೆ ಪೊಲೀಸರಿಗೆ ಸಹಕರಿಸುವಂತೆ ಗೀತವಿಷ್ಣುಗೆ ನ್ಯಾಯಾಲಯ ಷರತ್ತು ವಿಧಿಸಿ ಜಾಮೀಮು ಮಂಜೂರು ಮಾಡಿದೆ.
ಕಳೆದ ಸೆಪ್ಟಂಬರ್ 28 ರಂದು ಸೌತ್ ಎಂಡ್ ಸರ್ಕಲ್ ನಲ್ಲಿ ಕಾರು ಅಪಘಾತ ಮಾಡಿದ ಬಳಿಕ ವಿಷ್ಣು ಆಸ್ಪತ್ರೆಗೆ ದಾಖಲಾಗಿದ್ದ. ಆತನ ಕಾರಿನಲ್ಲಿ ಪೊಲೀಸರು 300 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದರು. ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಆತ ಶುಕ್ರವಾರ ಬೆಳಗ್ಗೆ ಅಲ್ಲಿಂದ ಪರಾರಿಯಾಗಿದ್ದ.